ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

Krishnaveni K

ಸೋಮವಾರ, 30 ಜೂನ್ 2025 (16:36 IST)
ಬೆಂಗಳೂರು: ಅತ್ಯಾಚಾರ ಆರೋಪಿಯಾಗಿರುವ ನಟ ಮಡೆನೂರು ಮನು ಮೇಲಿದ್ದ ನಿಷೇಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಿಂತೆಗೆದುಕೊಂಡಿದೆ. ಅಷ್ಟಕ್ಕೂ ಮನು ಮೇಲೆ ವಾಣಿಜ್ಯ ಮಂಡಳಿ ಕರುಣೆ ತೋರಿದ್ದು ಯಾಕೆ?

ಸಹನಟಿ ಮೇಲೆ ರೇಪ್ ಮತ್ತು ಬಲವಂತದಿಂದ ಮದುವೆಯಾದ ಆರೋಪದಲ್ಲಿ ಮನು ಬಂಧಿತರಾಗುತ್ತಿದ್ದಂತೇ ಅವರದ್ದು ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಮನು ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ಧ್ವನಿಯಿದೆ.

ಈ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿ ಅವರಿಗೆ ಚಿತ್ರರಂಗದಿಂದ ನಿಷೇಧ ಹೇರಿತ್ತು. ಆದರೆ ಈಗ ಮನು ಧ್ರುವ ಸರ್ಜಾ, ದರ್ಶನ್ ಮತ್ತು ಶಿವಣ್ಣನಿಗೆ ಕ್ಷಮಾಪಣೆ ಕೇಳಿ ಪತ್ರ ಬರೆದು ವಾಣಿಜ್ಯ ಮಂಡಳಿಗೆ ಸಲ್ಲಿಸಿದ್ದಾರೆ. ಈಗಾಗಲೇ ಮನು ಶಿವಣ್ಣ ಭೇಟಿಗೆ ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.

ಆದರೆ ಮನು ಕ್ಷಮಾಪಣೆ ಪತ್ರ ನೀಡಿರುವ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿ ಅವರಿಗೆ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ಮನು ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅವರಿಗೆ ಈಗ ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ. ಹೀಗಾಗಿ ಒಂದು ಅವಕಾಶ ಕೊಡಲು ತೀರ್ಮಾನಿಸಿದ್ದೇವೆ’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ