ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಬೇಲಾ, ಜೈಲಾ ಇಂದು ತೀರ್ಮಾನ

Krishnaveni K

ಗುರುವಾರ, 22 ಆಗಸ್ಟ್ 2024 (09:33 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಇಂದು ತೀರ್ಮಾನವಾಗುವ ಸಾಧ್ಯತೆಯಿದೆ.

ಪವಿತ್ರಾ ಪರ ಹಿರಿಯ ವಕೀಲ ಸೆಬಾಸ್ಟಿಯನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಲಿರುವ ಕೋರ್ಟ್ ಇಂದು ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ. ತಮ್ಮ ಬಂಧನವಾದ 72 ದಿನಗಳ ಬಳಿಕ ಪವಿತ್ರಾ ವಕೀಲರ ಮೂಲಕ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಸದ್ಯಕ್ಕೆ ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿಯಾಗಿದ್ದಾರೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣಕ್ಕೆ ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿತ್ತು ಎನ್ನುವುದು ಆರೋಪ. ಘಟನೆ ವೇಳೆ ಪವಿತ್ರಾ ಕೂಡಾ ಸ್ಥಳದಲ್ಲಿದ್ದಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳೂ ಸಿಕ್ಕಿವೆ.

ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆಯಿದ್ದಿದ್ದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿತ್ತು. ಇದು ರೇಣುಕಾಸ್ವಾಮಿಯದ್ದೇ ರಕ್ತದ ಕಲೆ ಎನ್ನುವುದು ಖಚಿತವಾಗಿತ್ತು. ಹೀಗಾಗಿ ಪವಿತ್ರಾ ಕೂಡಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಈಗಿನ ಪರಿಸ್ಥಿತಿ ಪ್ರಕಾರ ಆಕೆಗೆ ಈ ಹಂತದಲ್ಲಿ ಜಾಮೀನು ಸಿಗುವುದು ಕಷ್ಟವೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ