ಟ್ರೈಲರ್ ಮೂಲಕವೇ ಸದ್ದು ಮಾಡಿದ ಪಯಣಿಗರು!

ಬುಧವಾರ, 10 ಏಪ್ರಿಲ್ 2019 (17:13 IST)
ರಾಜ್‌ಗೋಪಿ ನಿರ್ದೇಶನದ ಪಯಣಿಗರು ಚಿತ್ರವೀಗ ಪ್ರೇಕ್ಷಕರ ನಡುವಿನ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಸಿನಿಮಾವನ್ನು ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ಸದ್ದುಗದ್ದಲವಿಲ್ಲದೆ ಪೂರೈಸಿಕೊಳ್ಳಲಾಗಿತ್ತು. ಪಯಣಿಗರು ಭಾರೀ ಸದ್ದು ಮಾಡಿದ್ದೇ ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೈಲರ್ ಮೂಲಕ. ಹೊಸತೇನೋ ಇದರಲ್ಲಿದೆ ಎಂಬ ಸುಳಿವು ನೀಡುತ್ತಲೇ ಪಯಣಿಗರು ಎಲ್ಲರ ಆಸಕ್ತಿಯನ್ನು ಸೆಳೆದುಕೊಂಡಿದ್ದಾರೆ.
ಈ ಹಿಂದೆ ಸಡಗರ ಎಂಬ ನಿರ್ದೇಶನ ಮಾಡೋ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗೋಪಿ. ಈ ಸಿನಿಮಾದಲ್ಲಿನ ಸೂಕ್ಷ್ಮಾತಿ ಸೂಕ್ಷ ವಷಯಗಳು, ಅದನ್ನು ಮನಮುಟ್ಟುವಂತೆ ನಿರೂಪಿಸಿದ್ದ ರೀತಿಗಳೆಲ್ಲವೂ ಜನಮನ ಸೆಳೆದಿತ್ತು. ಆ ನಂತರ ಕೋಮಲ್ ಅಭಿನಯಿಸಿದ್ದ ಡೀಲ್ ರಾಜ ಚಿತ್ರ ದೊಡ್ಡ ಮಟ್ಟದಲ್ಲಿಯೇ ಕಾಮಿಡಿ ಹಿಟ್ ಆಗಿ ದಾಖಲಾಗಿತ್ತು. ಈ ಮೂಲಕ ರಾಜ್ ಗೋಪಿ ಅವರಿಗೆ ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿಯೇ ಯಶ ಸಿಕ್ಕಿತ್ತು.
ಆದರೆ ಆ ನಂತರದಲ್ಲಿ ಒಂದು ವರ್ಷಗಳ ಕಾಲ ಪಟ್ಟಾಗಿ ಕೂತು ಚೆಂದದ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದ ರಾಜ್ ಗೋಪಿ ಪಯಣಿಗರನ್ನು ಅಂಥಾದ್ದೇ ಶ್ರದ್ಧೆಯಿಂದ ರೂಪಿಸಿದ್ದಾರೆ. ಈವರೆಗೂ ಸಾಕಷ್ಟು ಜರ್ನಿಯ ಕಥೆಗಳು ಬಂದಿವೆ. ಆದರೆ ಇದು ಅದೆಲ್ಲದರಾಚೆಗೆ ಬೇರೆಯದ್ದೇ ಥರದ ಫೀಲ್ ಕೊಡುವಂಥಾ ಚಿತ್ರ. ಇದು ಇದೇ ತಿಂಗಳ ಹದಿನೇಳನೇ ತಾರೀಕಿನಂದು ತೆರೆ ಕಾಣುತ್ತಿದೆ.
ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ