ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ. ಇಂದಿಗೆ ಒಂದು ವರ್ಷಗಳ ಹಿಂದೆ ದರ್ಶನ್ ರನ್ನು ಬಂಧಿಸಲಾಗಿತ್ತು.
ಪವಿತ್ರಾ ಗೌಡಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಾಸ್ವಾಮಿಯನ್ನು ದರ್ಶನ್ ಚಿತ್ರದುರ್ಗದಿಂದ ತಮ್ಮ ಸಂಗಡಿಗರ ಸಹಾಯದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್ ಗೆ ಕರೆಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎನ್ನುವುದು ಪ್ರಕರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇದೇ ದಿನ ದರ್ಶನ್ ರನ್ನು ಮೈಸೂರಿನ ಹೋಟೆಲ್ ನಿಂದ ಬಂಧಿಸಲಾಗಿತ್ತು. ಡೆವಿಲ್ ಶೂಟಿಂಗ್ ಗೆಂದು ಹೋಟೆಲ್ ನಲ್ಲಿ ಜಿಮ್ ಮಾಡಿ ದರ್ಶನ್ ಹೋಟೆಲ್ ರೂಂನಲ್ಲಿ ಸ್ನಾನಕ್ಕೆ ಹೋಗಿದ್ದಾಗ ಎಸಿಪಿ ಚಂದನ್ ನೇತೃತ್ವದ ಟೀಂ ದರ್ಶನ್ ರನ್ನು ಹೊರಗೆ ಕರೆದು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತಂದಿತ್ತು.
ಇದಾದ ಬಳಿಕ ಬೆಂಗಳೂರಿನಲ್ಲಿಯೇ ಇದ್ದ ಪವಿತ್ರಾ ಗೌಡರನ್ನೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಪೊಲೀಸರು ಕರೆಸಿಕೊಂಡರು. ಬಳಿಕ ಅವರನ್ನೂ ವಶಕ್ಕೆ ಪಡೆದುಕೊಂಡರು. ಈ ಘಟನೆ ನಡೆದು ಈಗ ಒಂದು ವರ್ಷವಾಗಿದೆ. ದರ್ಶನ್ ಮತ್ತು ಇತರೆ ಎಲ್ಲಾ ಆರೋಪಿಗಳು ಈಗ ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಇತ್ತ ರೇಣುಕಾಸ್ವಾಮಿ ಕುಟುಂಬದಲ್ಲಿ ದುಃಖ ಮಾಸಿಲ್ಲ. ಆದರೆ ಅಂದು ಗರ್ಭಿಣಿಯಾಗಿದ್ದ ರೇಣುಕಾಸ್ವಾಮಿ ಪತ್ನಿ ಈಗ ಗಂಡುಮಗುವಿನ ತಾಯಿಯಾಗಿದ್ದಾರೆ.