ಕಿಚ್ಚ ಸುದೀಪ್ ಗೆ ಬಿಗ್ ಬಾಸ್ ಅವಮಾನ ಎಂದ ಬೆನ್ನಲ್ಲೇ ಮತ್ತೆ ಟ್ವೀಟ್ ಮಾಡಿ ಗುಡ್ ನ್ಯೂಸ್ ಕೊಟ್ಟ ರೂಪೇಶ್ ರಾಜಣ್ಣ

Krishnaveni K

ಸೋಮವಾರ, 14 ಅಕ್ಟೋಬರ್ 2024 (14:51 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ನಿರೂಪಣೆಯಿಂದ ಕಿಚ್ಚ ಸುದೀಪ್ ಹಿಂದೆ ಸರಿಯಲು ಅವರಿಗೆ ಪರಿಭಾಷಿಕರಿಂದ ಆದ ಅವಮಾನವೇ ಕಾರಣ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ್ದರು.

ನಿನ್ನೆ ರಾತ್ರಿ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್ ಇದೇ ನನ್ನ ನಿರೂಪಣೆಯ ಕೊನೆಯ ಬಿಗ್ ಬಾಸ್. ಮುಂದಿನ ಸೀಸನ್ ನಿಂದ ನಾನು ಬಿಗ್ ಬಾಸ್ ನಲ್ಲಿರಲ್ಲ ಎಂದಿದ್ದರು. ಅವರು ಇಂತಹದ್ದೊಂದು ಟ್ವೀಟ್ ಮಾಡುತ್ತಿದ್ದಂತೆ ಬೇಸರಗೊಂಡ ಅಭಿಮಾನಿಗಳು ಹಾಗಿದ್ದರೆ ನಾವೂ ಇನ್ಮುಂದೆ ಬಿಗ್ ಬಾಸ್ ನೋಡಲ್ಲ ಎಂದಿದ್ದರು.

ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರೂಪೇಶ್ ರಾಜಣ್ಣ, ಬಿಗ್ ಬಾಸ್ ನಿಂದ ಕಿಚ್ಚ ಸುದೀಪ್ ಗೆ ಅವಮಾನವಾಗಿದೆ. ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ನಿರೂಪಣೆ ನಿಲ್ಲಿಸಬೇಕಾಗಿ ಬಂದಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ, ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದಿದ್ದರು.

ಅವರು ಇಂತಹದ್ದೊಂದು ಟ್ವೀಟ್ ಮಾಡುತ್ತಿದ್ದಂತೇ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಜೊತೆಗೆ ಕಿಚ್ಚನಿಗೇ ಅವಮಾನ ಮಾಡಿದರಾ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ರೂಪೇಶ್ ಮತ್ತೊಂದು ಟ್ವೀಟ್ ಮಾಡಿದ್ದು, ಇದು ಸುದೀಪ್ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ.

ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿದ ಬಿಗ್ ಬಾಸ್ ಆಯೋಜಕರು ಧನ್ಯವಾದಗಳು ತಮಗೂ ಹಾಗೂ ಕನ್ನಡ ಪರವಾಗಿ ನಿಂತ ಕಿಚ್ಚ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರದಲ್ಲಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ’ ಎಂದಿದ್ದಾರೆ. ಅವರ ಈ ಒಂದು ಟ್ವೀಟ್ ನೋಡಿದ ಅಭಿಮಾನಿಗಳಿಗೆ ಕಿಚ್ಚ ಮನಸ್ಸು ಬದಲಾಯಿಸಿ ಮುಂದಿನ ಸೀಸನ್ ಗೂ ನಿರೂಪಕರಾಗಿ ಉಳಿದುಕೊಳ್ಳಬಹುದೇನೋ ಎಂಬ ಭರವಸೆ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ