ಬೆಂಗಳೂರು: ಕಮಲ್ ಹಾಸನ್ ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದಿದ್ದಕ್ಕೆ ವಿವಾದವಾದ ನಂತರ ನಟ ಶಿವರಾಜ್ ಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಇಂದು ಕಣ್ಣಪ್ಪ ಈವೆಂಟ್ ನಲ್ಲಿ ರಗಳೆಯೇ ಬೇಡವೆಂದು ಯಾರನ್ನೂ ಹತ್ತಿರಕ್ಕೇ ಬಿಟ್ಟುಕೊಳ್ಳಲಿಲ್ಲ.
ಕಮಲ್ ಹಾಸನ್ ಕನ್ನಡ ವಿವಾದ ವಿಚಾರದಲ್ಲಿ ಹವಲರು ಶಿವಣ್ಣ ವಿರುದ್ಧವೂ ಅಸಮಾಧಾನಗೊಂಡಿದ್ದರು. ಶಿವಣ್ಣನ ಎದುರೇ ಕಮಲ್ ಕನ್ನಡಕ್ಕೆ ಅವಮಾನ ಮಾಡಿದ್ದರು. ಹಾಗಿದ್ದರೂ ಶಿವಣ್ಣ ಒಂದು ಮಾತೂ ಹೇಳಲಿಲ್ಲ.
ಬದಲಾಗಿ ಮರುದಿನ ಕಾರ್ಯಕ್ರಮವೊಂದರಲ್ಲಿ ಇದು ಸಣ್ಣ ವಿಚಾರ ವಿವಾದ ಮಾಡಬೇಡಿ, ಎಂದು ಕಮಲ್ ಹಾಸನ್ ರನ್ನೇ ಸಮರ್ಥಿಸಿಕೊಂಡಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಶಿವಣ್ಣನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಕೇಳಿಬಂದಿದೆ.
ಇದರ ಬೆನ್ನಲ್ಲೇ ಇಂದು ಶಿವಣ್ಣ ತೆಲುಗಿನ ಕಣ್ಣಪ್ಪ ಸಿನಿಮಾ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಶಿವಣ್ಣನಿಗೆ ಎಂದಿಗಿಂತಲೂ ಹೆಚ್ಚು ಭದ್ರತೆ ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದರೂ ಕನ್ನಡ ವಿವಾದದ ಬಗ್ಗೆ ಏನೂ ಹೇಳಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದರೂ ಏನೂ ಮಾತನಾಡದೇ ತೆರಳಿದ್ದಾರೆ.