ದರ್ಶನ್ ಗೆ ನಾನೊಬ್ಬಳೇ ಪತ್ನಿ: ಸಿಡಿದೆದ್ದ ವಿಜಯಲಕ್ಷ್ಮಿ

Krishnaveni K

ಗುರುವಾರ, 4 ಜುಲೈ 2024 (10:59 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗ ಪವಿತ್ರಾ ಗೌಡರನ್ನು ಎರಡನೇ ಪತ್ನಿ ಎಂದ ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಹಂಚಿಕೊಳ್ಳುವಾಗ ಕಮಿಷನರ್ ದಯಾನಂದ್ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು ಹಲವರು ಪವಿತ್ರಾ ಗೌಡ ಎರಡನೇ ಪತ್ನಿ ಎನ್ನುತ್ತಲೇ ಇದ್ದರು. ಎರಡನೇ ಪತ್ನಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ದರ್ಶನ್ ಸಂಗಡಿಗರ ಜೊತೆ ಸೇರಿಕೊಂಡು ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು ಎನ್ನಲಾಗಿತ್ತು.

ಇದರ ಬಗ್ಗೆ ಈಗ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಜಯಲಕ್ಷ್ಮಿ ‘2003 ರಲ್ಲಿ ನಾನು ಮತ್ತು ದರ್ಶನ್ ಮದುವೆಯಾಗಿದ್ದು, ನಾನು ದರ್ಶನ್ ಅವರ ಏಕೈಕ ಪತ್ನಿಯಾಗಿದ್ದೇನೆ. ನೀವು ಪವಿತ್ರಾ ಗೌಡರನ್ನು ದರ್ಶನ್ ಅವರ ಎರಡನೇ ಪತ್ನಿ ಎಂದು ಹೇಳಿದ್ದೀರಿ. ಆದರೆ ಪವಿತ್ರಾ ಪತ್ನಿಯಲ್ಲ, ದರ್ಶನ್ ಸ್ನೇಹಿತೆಯಷ್ಟೇ. ಪವಿತ್ರಾ ಈಗಾಗಲೇ ಸಂಜಯ್ ಸಿಂಗ್ ಎಂಬವರನ್ನು ಮದುವೆಯಾಗಿ ಓರ್ವ ಪುತ್ರಿಯಿದ್ದಾಳೆ. ನಿಮ್ಮ ಹೇಳಿಕೆಯಿಂದ ನನಗೆ ಬೇಸರವಾಗಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಿ’ ಎಂದು ವಿಜಯಲಕ್ಷ್ಮಿ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.

ದರ್ಶನ್ ಮತ್ತು ಪವಿತ್ರಾ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ವಿಜಯಲಕ್ಷ್ಮಿ ಮತ್ತು ಪವಿತ್ರಾ ನಡುವೆ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲೂ ವಾರ್ ಗಳು ನಡೆದಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ