ಪುನೀತ್ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಯಾಕೆ?!

ಶನಿವಾರ, 13 ನವೆಂಬರ್ 2021 (12:07 IST)
ನಟ ಪುನೀತ್ ರಾಜ್ಕುಮಾರ್ ಅವರಿಗೆ ಚಿತ್ರರಂಗದ ವತಿಯಿಂದ ನಮನ ಸಲ್ಲಿಸುವ ಸಲುವಾಗಿ ‘ಪುನೀತ ನಮನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 1,500 ಜನರು ಸೇರಿ ನಮನ ಸಲ್ಲಿಸುವ ಯೋಜನೆ ರೂಪಿಸಲಾಗಿದೆ. ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರುವ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾದರೆ ಸಾರ್ವಜನಿಕರಿಗೆ ಇದರ ವೀಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ನಿರ್ಮಾಪಕ ಸಾ.ರಾ.ಗೋವಿಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಲ್ಲಿ ಪುನೀತ್ ನಮನ ಕಾರ್ಯಕ್ರಮದ ಲೈವ್ ಪ್ರಸಾರವಾಗಲಿದೆ. ಅದನ್ನು ವೀಕ್ಷಣೆ ಮಾಡುವ ಮುಖಾಂತರ ಸಹಕಾರ ನೀಡಬೇಕು ಎಂದು ಸಾರಾ ಗೋವಿಂದು ಮನವಿ ಮಾಡಿದ್ದಾರೆ.
ವೇದಿಕೆ ಮೇಲೆ ಯಾವುದೇ ಮನರಂಜನೆ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ. ನಾಗೇಂದ್ರ ಪ್ರಸಾದ್ ಅವರ ವಿಶೇಷ ಗೀತೆ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ಪುನೀತ್ ನಡೆದು ಬಂದ ದಾರಿ ಬಗ್ಗೆ ಒಂದು ವಿಡಿಯೋ ಪ್ರಸಾರ ಮಾಡಲಾಗುತ್ತದೆ. ‘ಪುನೀತ್ ನಮನ’ ಕಾರ್ಯಕ್ರಮದ ದಿನ ಕರ್ನಾಟಕದಲ್ಲಿ ಚಿತ್ರೋದ್ಯಮ ಬಂದ್ ಮಾಡಲಾಗುತ್ತದೆ. ಮಧ್ಯಾಹ್ನ 3 ಘಂಟೆ ನಂತರ ಕಾರ್ಯಕ್ರಮ ಆರಂಭ ಆಗಲಿದ್ದು, ಮೈಸೂರು ರಾಜ ಮನೆತನದ ಯದುವೀರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್ ಅವರಿಂದ ಪುನೀತ್ ರಾಜ್ಕುಮಾರ್ ಹಾಡುಗಳನ್ನ ಹಾಡಿಸಲಾಗುತ್ತದೆ’ ಎಂದು ಸಾರಾ ಗೋವಿಂದ್ ಮಾಹಿತಿ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ