ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ವೇಲ್ ಬಿಗಿದು ಕೊಂದ ಪ್ರಿಯತಮ

ಶನಿವಾರ, 6 ನವೆಂಬರ್ 2021 (20:49 IST)
ಬೆಂಗಳೂರು: ವಿವಾಹಿತ ಮಹಿಳೆಯೊಂದಿಗೆ ಜಗಳ ಮಾಡಿ ವೇಲ್‌ನಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. 
 
ವಿಜಯನಗರ ಪಟ್ಟೆಗಾರಪಾಳ್ಯದ ನಿವಾಸಿ ಗಾಯತ್ರಿ ಕೊಲೆಯಾದವಳು. ಮಂಜು ಪ್ರಸಾದ್ ಬಂಧಿತ. 
 
ಪತಿಯಿಂದ ದೂರವಾಗಿದ್ದ ಗಾಯತ್ರಿ ಮನೆ ಕೆಲಸ ಮಾಡಿಕೊಂಡು ವಿಜಯನಗರದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು. ಈಕೆಯ ಇಬ್ಬರು ಮಕ್ಕಳು ಪತಿ ಮನೆಯಲ್ಲಿ ವಾಸಿಸುತ್ತಿದ್ದರು. 
 
ಪಾಲಿಕೆಯ ಗುತ್ತಿಗೆ ಆಧಾರದ ಮೇಲೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜು, ಕಳೆದ 3 ವರ್ಷಗಳಿಂದ ಗಾಯತ್ರಿ ಜತೆಗೆ ಆತ್ಮೀಯತೆ ಹೊಂದಿದ್ದ. ಆದರೆ ಕಳೆದ 3 ತಿಂಗಳಿಂದ ಆತನಿಗೆ ಯಾವುದೇ ಕೆಲಸ ಇಲ್ಲದೇ ನೊಂದಿದ್ದ. ಶನಿವಾರ ಮಧ್ಯಾಹ್ನ 12 ಗಂಟೆಗೆ ಎಂದಿನಂತೆ ಗಾಯತ್ರಿ ಮನೆಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
 
ಮಂಜು, ನಿನ್ನೊಂದಿಗೆ ಇರಲು ನನಗೆ ಇಷ್ಟವಿಲ್ಲ. ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ. ಒಪ್ಪದ ಗಾಯತ್ರಿ ನನಗೆ ನೀನು ಬೇಕು ಎಂದು ಹಠ ಮಾಡಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಜಗಳ ತಾರಕಕ್ಕೇರಿದಾಗ ಮನೆಯಲ್ಲಿದ್ದ ವೇಲ್‌ನಿಂದ ಪ್ರೇಯಸಿ ಗಾಯತ್ರಿಯ ಕತ್ತು ಹಿಸುಕಿ ಮಂಜು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ನಂತರ ವಿಜಯನಗರ ಠಾಣೆಗೆ ಹಾಜರಾಗಿ ಕೊಲೆ ಮಾಡಿರುವ ಬಗ್ಗೆ  ಮಾಹಿತಿ ನೀಡಿದ್ದ. ಕೂಡಲೇ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಪೊಲೀಸರು ಗಾಯತ್ರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿ ಮಂಜುನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ