ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ -11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಲಕ್ಷಲಕ್ಷ ರೂಪಾಯಿ ವಂಚಿಸಿದ ಆರೋಪ ಸುರೇಶ್ ವಿರುದ್ಧ ಕೇಳಿ ಬಂದಿದೆ.
ದೊಡ್ಮನೆಯಲ್ಲಿ ನೇರ ಸ್ವಭಾವದ ಮೂಲಕ ಗೋಲ್ಡ್ ಸುರೇಶ್ ತನ್ನ ನಡವಳಿಕೆ ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಬಿಗ್ ಬಾಸ್ ಮುಗಿದ ಬಳಿಕವೂ ಸುರೇಶ್ ದೊಡ್ಮನೆ ಸ್ಪರ್ಧಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ವಿರುದ್ದ ವ್ಯಕ್ತಿಯೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ.
ಕೇಬಲ್ ಚಾನೆಲ್ ಸೆಟ್ಅಪ್ ಮಾಡಿಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿಯನ್ನು ಸುರೇಶ್ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಆರೋಪ ಮಾಡಿದ್ದಾರೆ.
ಮೈನುದ್ದಿನ್ ಆರೋಪವೇನು: ಪಟ್ಟಣದಲ್ಲಿ ನನಗೆ ಕೇಬಲ್ ಚಾನೆಲ್ ಅಪ್ ಮಾಡಬೇಕಾದ ಆಸೆಯಿತ್ತು. ಈ ಹಿನ್ನೆಲೆಯಲ್ಲಿ ನಾನು ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣ ಖರೀದಿಗೆ 2017ರಲ್ಲಿ ಸುರೇಶ್ ಅವರ ಜತೆ ₹14 ಲಕ್ಷ ಒಪ್ಪಂದ ಮಾಡಿಕೊಂಡಿದ್ದೆ. ಆರಂಭದಲ್ಲಿ ಮುಂಗಡ ರೂಪದಲ್ಲಿ ₹4 ಲಕ್ಷ ಕೊಟ್ಟಿದ್ದೆ. ನಂತರ ಹಂತ ಹಂತವಾಗಿ ₹7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ.
ಹಣ ಕೊಟ್ಟ ಬಳಿಕ ಸ್ವಲ್ಪ ದಿನ ಕೆಲಸ ಮಾಡಿ, ಆ ನಂತ್ರ ಕೆಲಸವನ್ನು ಅರ್ಧದಲ್ಲೇ ಬಿಟ್ಟಿದ್ದಾರೆ. ಬಾಕಿ ಹಣವನ್ನು ಅವರಿಗೆ ನೀಡಿದ್ದರೂ, ಕೆಲಸ ಮಾಡದೆ ಸುಮ್ಮನಾಗಿದ್ದಾರೆ. ಕೆಲಸ ಮಾಡಲು ನಿರಾಕರಿಸಿದ್ದಾರೆ ಎಂದು ಆರೋಪವನ್ನು ಮಾಡಲಾಗಿದೆ.
ಹಣ ವಾಪಸ್ ನೀಡಿ ಅಂಥ ಕೇಳಿದ್ದಕ್ಕೆ 1 ಲಕ್ಷ ರೂಪಾಯಿ ವಾಪಾಸ್ ಕೊಟ್ಟಿದ್ದಾರೆ. ಆ ಬಳಿಕ ನಾನು ನನ್ನ ಸ್ನೇಹಿತ ಬಸವರಾಜ್ ಅವರು ಸುರೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ ಎಂದಿದ್ದಾರೆ. 2025ರ ಏಪ್ರಿಲ್ 29 ರಂದು ಸುರೇಶ್ ಮೈನುದ್ದಿನ್ ಸ್ನೇಹಿತ ಬಸವರಾಜ್ ಅವರ ಖಾತೆಗೆ 50,000 ರೂ. ವರ್ಗಾಯಿಸಿದ್ದರೂ, ಉಳಿದಿರುವ ಸುಮಾರು 4 ಲಕ್ಷ ರೂ. ಪಾವತಿ ಮಾಡಿಲ್ಲ ಎಂದು ದೂರಲಾಗಿದೆ.
ಸುಳ್ಳು ಆರೋಪ: ಮೈನುದ್ದಿನ್ ಆರೋಪಕ್ಕೆ ಸುರೇಶ್ ಅವರು ಪ್ರತಿಕ್ರಿಯಿಸಿದ್ದು, ಹಣಕ್ಕೆ ತಕ್ಕಂತೆ ಸ್ಟೂಡಿಯೋ ಎಲ್ಲಾ ಸೆಟ್ ಮಾಡಿಕೊಟ್ಟಿದ್ದೇನೆ. ಸುಮ್ಮನೆ ಆರೋಪ ಮಾಡುತ್ತಿರುವುದರಿಂದ ನಾನು ಕಾನೂನು ಮೊರೆ ಹೋಗ್ತಿನಿ, ಹೋರಾಟ ಮಾಡ್ತಿನಿ ಎಂದಿದ್ದಾರೆ. ಈ ಕುರಿತು ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.