ಬಿಬಿಎಂಪಿ ಬಜೆಟ್ ಕುರಿತು ಎಎಪಿಯಿಂದ ಜನರ ಆಶೋತ್ತರ ಸಂಗ್ರಹ: ನಗರಾಧ್ಯಕ್ಷ ಮೋಹನ್‌ ದಾಸರಿ

ಶುಕ್ರವಾರ, 25 ಫೆಬ್ರವರಿ 2022 (20:50 IST)
bbmp
ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ಸಂಬಂಧಿಸಿ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರು ಜನರ ಬೇಡಿಕೆ ಹಾಗೂ ಅಗತ್ಯಗಳನ್ನು ಸಂಗ್ರಹಿಸಿ ಬಿಬಿಎಂಪಿಗೆ ಸಲ್ಲಿಸಲಿದೆ ಎಂದು ಪಕ್ಷದ ನಗರಾಧ್ಯಕ್ಷ ಮೋಹನ್‌ ದಾಸರಿ ಹೇಳಿದರು.
 
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌ ದಾಸರಿ ಈ ಹಿಂದಿನ ಬಜೆಟ್‌ಗಳಲ್ಲಿ ಬೆಂಗಳೂರಿಗಾಗಿ ಮಂಡಿಸಿದ ಅಂಶಗಳಿಗೂ ಹಾಗೂ ಬೆಂಗಳೂರು ಜನತೆಯ ಬೇಡಿಕೆಗಳಿಗೂ ಸಂಬಂಧವೇ ಇರಲಿಲ್ಲ. ಎಸಿ ರೂಮಿನಲ್ಲಿ ಕುಳಿತು ಬಜೆಟ್‌ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಈ ಬಾರಿ ಹಾಗಾಗಬಾರದು ಎಂಬ ಕಾರಣಕ್ಕೆ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ಸಾರ್ವಜನಿಕ ಸಂಪರ್ಕ ಯೋಜನೆಯನ್ನು ಹಮ್ಮಿಕೊಂಡಿದೆ. ನಗರದ ಅಭಿವೃದ್ಧಿಗೆ ಸಂಬಂಧಿಸಿ ಸಾಮಾನ್ಯ ಜನರಿಂದ ನೇರವಾಗಿ ಬೇಡಿಕೆಗಳನ್ನು ಸಂಗ್ರಹಿಸಿ ಬಿಬಿಎಂಪಿಗೆ ಸಲ್ಲಿಸುತ್ತೇವೆ. ತಮ್ಮ ರಸ್ತೆ, ವಾರ್ಡ್‌, ನಗರದ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸಾವಿರಾರು ಜನರಿಂದ ಮಾಹಿತಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
 
ಜನರ ಹಾಗೂ ನಗರದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂಬುದನ್ನು ಎಎಪಿಯ ದೆಹಲಿ ಆಡಳಿತವು ಸಾಧಿಸಿ ತೋರಿಸಿದೆ. ಅಲ್ಲಿನ ರಸ್ತೆಗಳ ಅಭಿವೃದ್ಧಿ ಹಾಗೂ ಸಿಸಿಟಿವಿ ಅಳವಡಿಕೆಯಂತಹ ಸುರಕ್ಷತಾ ಕ್ರಮಗಳು ವಿಶ್ವದರ್ಜೆಯದ್ದಾಗಿದೆ. ಶಾಲೆ, ಆರೋಗ್ಯ ಕೇಂದ್ರ, ನಾಗರಿಕ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಕೇಜ್ರಿವಾಲ್‌ ಸರ್ಕಾರ ತಂದಿದೆ. ವ್ಯವಸ್ಥೆಯಲ್ಲಿನ ಸೋರಿಕೆ ಹಾಗೂ ಭ್ರಷ್ಟಾಚಾರದಿಂದಾಗಿ ಬಿಬಿಎಂಪಿಯ ಬಜೆಟ್‌ ಬೆಂಗಳೂರಿಗೆ ಸಾಕಾಗುತ್ತಿಲ್ಲ. ಕಳೆದ ವರ್ಷದ ಬಿಬಿಎಂಪಿಯು 9,280 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರೂ, ಅದರಲ್ಲಿ ಕೇವಲ 85 ಕೋಟಿ ರೂಪಾಯಿಯನ್ನು ಸಾರ್ವಜನಿಕ ಆರೋಗ್ಯಕ್ಕೆ ಖರ್ಚು ಮಾಡಲಾಗಿದೆ. ಶಿಕ್ಷಣಕ್ಕೂ ಕೇವಲ 85 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಬೆಂಗಳೂರಿನ ನಿರೀಕ್ಷೆಗೆ ಈ ಮೊತ್ತ ಸಾಲದು ಮೋಹನ್ ದಾಸರಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು ಎಂದು ಹೇಳಿದರು.
 
ಪಕ್ಷದ ಮುಖಂಡರಾದ ಪ್ರಕಾಶ್‌ ನೆಡುಂಗಡಿ ಮಾತನಾಡಿ, “ಬೆಂಗಳೂರಿನ ಜನರಿಗೆ ಅಗತ್ಯವಿರುವ ರಸ್ತೆಗಳು, ಒಳಚರಂಡಿಗಳು, ಕಸ ವಿಲೇವಾರಿ, ಸುರಕ್ಷತೆ ಹಾಗೂ ಇನ್ನೂ ಅನೇಕ ಅಗತ್ಯ ಸೌಲಭ್ಯಗಳನ್ನು ನೀಡುವುದರಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಬಜೆಟ್‌ ವಿಫಲವಾಗುತ್ತಿದೆ. ಬಿಬಿಎಂಪಿಯ ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳು ಶೋಚನೀಯ ಸ್ಥಿತಿಯಲ್ಲಿವೆ. ಇದರಿಂದಾಗಿ ಬೆಂಗಳೂರಿನ ಜನರು ದುಬಾರಿ ಮೊತ್ತವನ್ನು ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳಿಗೆ ವಿನಿಯೋಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ನಾಗರಿಕರು ಸರ್ಕಾರದ ಪ್ರಮಾಣಪತ್ರಗಳು ಅಥವಾ ಪಿಂಚಣಿಗಳನ್ನು ಪಡೆಯಲು ಲಂಚ ಕೊಡಬೇಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಮಾಧ್ಯಮ ಮುಖ್ಯಸ್ಥ ವಿಜಯ್ ಶಾಸ್ತ್ರಿಮಠ ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ