ಮರಳು ಮೂಟೆಗಳನ್ನು ಹೊತ್ತು ಅಭಿಮನ್ಯು ತಾಲೀಮು

ಮಂಗಳವಾರ, 6 ಸೆಪ್ಟಂಬರ್ 2022 (20:49 IST)
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಜಂಬೂಸವಾರಿ ಮೆರವಣಿಗೆಗೆ 1 ತಿಂಗಳು ಬಾಕಿ ಇದೆ. ಗಜಪಡೆ ಕ್ಯಾಪ್ಟನ್  ಅಭಿಮನ್ಯು ಅಂಡ್ ಟೀಮ್ ಈಗಾಗಲೇ ವಿಜಯದಶಮಿ ಮೆರವಣಿಗೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ಮರದ ಅಂಬಾರಿ ಹೊತ್ತು ಸಾಗುವ ತಾಲೀಮಿಗೆ ಸೋಮವಾರ ಚಾಲನೆ ದೊರೆತಿದೆ.
ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಬೇಕಿದೆ. ಹೀಗಾಗಿ ಆನೆಗೆ ತಾಲೀಮು ಮಾಡಿಸಿ ಅಣಿಗೊಳಿಸಲಾಗುತ್ತಿದೆ.
 
ದಸರಾ ಗಜಪಡೆಯ ತಾಲೀಮು ಸೋಮವಾರದಿಂದ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರದ ಅಂಬಾರಿ ಹೊತ್ತು ಅಭಿಮನ್ಯುವಿಗೆ ತಾಲೀಮು ಆರಂಭಿಸಲಾಯಿತು. ಈ ಬಾರಿಯ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಸಂಜೆಯ ವೇಳೆಗೆ ಹೊರಡಲಿದೆ. ಹಾಗಾಗಿ ದಸರಾ ಗಜಪಡೆ ಸಂಜೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆಯೇ‌ ತರಬೇತಿ ನೀಡಲಾಗುತ್ತಿದೆ. ಮೊದಲ ದಿನದ ತಾಲೀಮು ಯಶಸ್ವಿಯಾಗಿದ್ದು, ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಇತರೆ ಆನೆಗಳು ಸಾಥ್ ನೀಡಿವೆ.
 
ಮೊದಲ ದಿನದ ಮರದ ಅಂಬಾರಿ ಹೊರುವ ತಾಲೀಮಿನ ವೇಳೆ 750 ಕೆ.ಜಿಗೂ ಹೆಚ್ಚು ಭಾರವನ್ನು ಹೊತ್ತು ಸಾಗಿದ ಅಭಿಮನ್ಯು ಶಕ್ತಿ ಕಂಡು ಎಲ್ಲರೂ ಸಂತಸಪಟ್ಟರು. 280 ಕೆ.ಜಿ ತೂಕದ ಮರದ ಅಂಬಾರಿ ಜೊತೆಗೆ ಗಾದಿ, ನಮ್ದಾ ಹಾಗೂ ಮರಳಿನ ಮೂಟೆಗಳು ಸೇರಿದಂತೆ 750 ಕೆ.ಜಿಗೂ ಹೆಚ್ಚಿನ ಭಾರ ಹೊತ್ತು ಸಾಗಿದ ಅಭಿಮನ್ಯು ಬನ್ನಿಮಂಟಪದ ವರೆಗೂ ಸಾಗಿ ಅರಮನೆಗೆ ವಾಪಸ್ ಹಿಂತಿರುಗಿದ್ದಾನೆ.ಅಭಿಮನ್ಯು ಜೊತೆಗೆ ಧನಂಜಯ ಮತ್ತು ಮಹೇಂದ್ರ ಆನೆಗಳಿಗೂ ಮರದ ಅಂಬಾರಿ ಹೊತ್ತು ಸಾಗುವ ತಾಲೀಮು ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ