ಶಿಕ್ಷಣ ಇಲಾಖೆಗೆ ತಲೆನೋವಾದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಗೈರುಹಾಜರಿ

ಶುಕ್ರವಾರ, 1 ಏಪ್ರಿಲ್ 2022 (19:50 IST)
ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಿರುವ ಶಿಕ್ಷಣ ಇಲಾಖೆಗೆ ಮಕ್ಕಳು ಗೈರುಹಾಜರಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ದಿನೇದಿನೇ ಪರೀಕ್ಷೆಗೆ ಗೈರು ಹಾಜರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಜಾಬ್​ಗಿಂತಲೂ ಪರೀಕ್ಷೆ ಮುಖ್ಯ ಎಂದು ವಿದ್ಯಾರ್ಥಿಗಳು ಬರ್ತಿದ್ದಾರೆ. ಹಿಜಾಬ್ ಗಂಭೀರ ಸಮಸ್ಯೆಯೇ ಇಲ್ಲ ಎಂದು ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ವಾದಿಸುತ್ತಿದ್ದಾರೆ. ಆದರೆ ಪರೀಕ್ಷೆಯ ಮೊದಲ ಮತ್ತು ಎರಡನೇ ದಿನ ಪರೀಕ್ಷೆಗೆ ಸಾಲುಸಾಲಾಗಿ ಗೈರು ಹಾಜರಾಗಿದ್ದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
 
ಪರೀಕ್ಷೆಗೆ ಹಲವು ವಿದ್ಯಾರ್ಥಿಗಳು ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಏನು ಕಾರಣ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಸಚಿವರ ಸೂಚನೆ ಮೇರೆಗೆ, ಗೈರು ಹಾಜರಿಗೆ ಸೂಕ್ತ ಕಾರಣ ತಿಳಿದು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಎರಡೂ ದಿನವೂ ಪರೀಕ್ಷೆಗೆ ಎಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂಬ ಬಗ್ಗೆ ಮಕ್ಕಳನ್ನು ಅಥವಾ ಅವರ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾಹಿತಿ ಸಂಗ್ರಹಿಸಿ ತಿಳಿಸಬೇಕು ಎಂದು ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ.ಎಸ್​ಎಸ್​ಎಲ್​ಸಿ ಪರೀಕ್ಷೆಯ 2ನೇ ದಿನವಾದ ಬುಧವಾರ (ಮಾರ್ಚ್ 30) ಸಾವಿರಾರು ವಿದ್ಯಾರ್ಥಿಗಳು ಗೈರಾಗಿದ್ದರು. ದ್ವಿತೀಯ ಭಾಷೆ ಇಂಗ್ಲಿಷ್​ಗೆ ಬರೋಬ್ಬರಿ 22,063 ವಿದ್ಯಾರ್ಥಿಗಳು ಗೈರಾಗಿದ್ದರು. ಮೊದಲ ದಿನದ ಪರೀಕ್ಷೆಗಿಂತ ನಿನ್ನೆ ಹೆಚ್ಚು ವಿದ್ಯಾರ್ಥಿಗಳು ಗೈರಾಗಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿದೆ. ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ 195 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಮೊದಲ ದಿನದ ಪರೀಕ್ಷೆಯಲ್ಲಿ 20,994 ವಿದ್ಯಾರ್ಥಿಗಳು ಗೈರಾಗಿದ್ದರು. ಎರಡನೇ ದಿನದ ಪರೀಕ್ಷೆಯಲ್ಲಿ ಬರೋಬ್ಬರಿ 22,063 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ದ್ವಿತೀಯ ಭಾಷೆಯನ್ನು ಒಟ್ಟು 8,68,206 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 8,46,143 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ