ನಾಗಮಂಗಲದಲ್ಲಿ ಪ್ರಚಾರ ವೇಳೆ ನಟ ದರ್ಶನ್ ನೋಡಲು ನೂಕುನುಗ್ಗಲು

Krishnaveni K

ಮಂಗಳವಾರ, 23 ಏಪ್ರಿಲ್ 2024 (15:03 IST)
Photo Courtesy: Twitter
ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮತಯಾಚಿಸಿದರು.
 
ಪಟ್ಟಣದ ಟಿ.ಬಿ.ಸರ್ಕಲ್, ಮಂಡ್ಯ ಸರ್ಕಲ್, ಬ್ರಹ್ಮದೇವರಹಳ್ಳಿ ಸರ್ಕಲ್‌ ನಲ್ಲಿ ತೆರೆದ ವಾಹನದಲ್ಲಿ ಆಗಮಿಸಿದ ನಟ ದರ್ಶನ್, ಸಚಿವ ಚಲುವರಾಯಸ್ವಾಮಿ, ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ನೋಡಲು ಬಿರುಬಿಸಿಲಿನಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿತ್ತು.
 
ಬಿ.ಎಂ.ರಸ್ತೆಯ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಕಾಂಗ್ರೆಸ್ ಗೆ ಜೈಕಾರ ಹಾಕಿದರು. ನೂರಾರು ಯುವಕರು ಬೈಕ್ ನಲ್ಲಿ ಸಾಗಿ ಸ್ವಾಗತ ಕೋರುತ್ತಿದ್ದರು.
 
ಇದೇ ವೇಳೆ ಮಾತನಾಡಿದ ದರ್ಶನ್, ಸ್ಟಾರ್ ಚಂದ್ರು ಅವರು ಒಳ್ಳೆ ಸಹೃದಯಿ, ವ್ಯಕ್ತಿ. ಜನಸೇವೆ ಮಾಡಲು ಬಂದಿದ್ದಾರೆ. ಇವರನ್ನು ಗೆಲ್ಲಿಸುವ ಅವಕಾಶ ಸಿಕ್ಕಿದೆ. ಅದನ್ನು ಕಳೆದುಕೊಳ್ಳಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
 
ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಮಾಡಿ. ಇದೇ ತಾಲೂಕಿನ ರೈತನ ಮಗನನ್ನು ಗೆಲ್ಲಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ