ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಖಂಡಿಸಿ ರೋಡಿಗಿಳಿದ ಕಾಂಗ್ರೆಸ್

ಗುರುವಾರ, 10 ಅಕ್ಟೋಬರ್ 2019 (19:17 IST)
ಕರ್ನಾಟಕ ರಾಜ್ಯ ಸರ್ಕಾರದಿಂದ  ವಿಧಾನಸಭಾ ಅಧಿವೇಶನದ ಕಲಾಪದ ವೇಳೆಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಸರಕಾರದ ಕ್ರಮ ಖಂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಕ್ಕೆ ಅಧಿವೇಶನದಲ್ಲಿ ನಿರ್ಬಂಧ ಹೇರಿರುವುದು ಖಂಡನೀಯ. ಮಾಧ್ಯಮಗಳು ಸಾರ್ವಜನಿಕ ಹಾಗೂ ಸರ್ಕಾರದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತವೆ. ಮಾಧ್ಯಮಗಳಿಗೆ ಈ ರೀತಿ ನಿರ್ಬಂಧ ಹೇರಿರುವುದು ಸರಿಯಲ್ಲ. ಅಲ್ಲದೇ ಪ್ರತಿಯೊಂದು ಅಧಿವೇಶನಗಳು ಸಾರ್ವಜನಿಕರಿಗೆ ಅರ್ಥವಾಗಬೇಕೆಂದರೆ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತವೆ.

ಅಧಿವೇಶನಗಳು  ಪಾರದರ್ಶಕತೆಯಿಂದ ನಡೆಯಬೇಕಿದ್ದರೆ ಅದು ಮಾಧ್ಯಮಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿದಾಗ ಮಾತ್ರ. ಆದರೆ ಇದೀಗ ರಾಜ್ಯ ಸರ್ಕಾರ ಮಾಧ್ಯಮಗಳನ್ನು ಹೊರಗಿಟ್ಟು ಅಧಿವೇಶನ ನಡೆಸುವುದು ಸರಿಯಲ್ಲ. ಕೂಡಲೇ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧವನ್ನು ಮರಳಿ ಪಡೆಯಬೇಕೆಂದು ಆಗ್ರಹಿಸಿದರು. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ