ಆಸ್ತಿ ಹೊಂದಿದ್ದ ವೃದ್ಧೆಗೆ ಮಕ್ಕಳಿಂದಲೇ ಕಿರುಕುಳ

geetha

ಶನಿವಾರ, 17 ಫೆಬ್ರವರಿ 2024 (17:00 IST)
ತುಮಕೂರು : ನಿವೃತ್ತ ಸಿಡಿಪಿಒ ಆಗಿದ್ದ ಪಂಕಜಾಕ್ಷಿ (80)  ಸಂತ್ರಸ್ಥ ವೃದ್ದೆಯಾಗಿದ್ದು, ಆಸ್ತಿ ಮತ್ತು ಹಣಕ್ಕಾಗಿ ಹೆತ್ತತಾಯಿಯನ್ನೇ ಮಕ್ಕಳು ಗೃಹಬಂಧನದಲ್ಲಿರಿಸಿ ಕಿರುಕುಳ ನೀಡಿರುವ ಘಟನೆ ತುಮಕೂರಿನ ಸಾಡೆಪುರ ಗ್ರಾಮದಲ್ಲಿ ನಡೆದಿದೆ.  ಕಳೆದ 11 ತಿಂಗಳಿಂದ ಮಗ ಸೊಸೆ ಅವರನ್ನು ಗೃಹಬಂಧನದಲ್ಲಿರಿಸಿದ್ದರೆಂದು ತಿಳಿದುಬಂದಿದೆ. ಪಂಕಜಾಕ್ಷಿ ಅವರಿಗೆ 12 ಮನೆಗಳ ಆಸ್ತಿಯಲ್ಲದೇ 50 ಸಾವಿರ ಪಿಂಚಣಿ ಹಣ ಕೂಡ ಬರುತ್ತಿತ್ತು. ಈಗಾಗಲೇ ಅವುಗಳೊಂದಿಗೆ ಚಿನ್ನದ ಒಡವೆಗಳನ್ನೂ ಕಿತ್ತುಕೊಂಡಿದ್ದ ಮಗ ಸುರೇಶ್‌ ಹಾಗೂ ಸೊಸೆ ಆಶಾ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಪಡಿಸಿದ್ದರು.

ಸ್ಥಳೀಯರು ಅಜ್ಜಿಯ ದುಸ್ಥಿತಿ ಬಗ್ಗೆ  ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ  ಮಾಹಿತಿ ನೀಡಿದ್ದರು. ಹೀಗಾಗಿ ಪಂಕಜಾಕ್ಷಿ ಅವರ ಮನೆಗೆ ತುಮಕೂರು ‌ನಗರ ಪೊಲೀಸರು ಹಾಗೂ ಸಾಂತ್ವನ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ, ವೃದ್ದೆಯನ್ನ ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಲಾಗಿದೆ. ಬಳಿಕ ಮಕ್ಕಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೊಕ್ಕಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ವಿಚಾರಣೆ ನಡೆಸಿ ನಾಲ್ವರು ಮಕ್ಕಳನ್ನೂ ಕರೆಸಿ ಎಚ್ಚರಿಕೆ ನೀಡಿದ್ದಾರೆ. ವೃದ್ದೆಯನ್ನ ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟ ನ್ಯಾಯಾಧೀಶರು ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿ ವೃದ್ಧೆಗೆ ಯಾವುದೇ ತೊಂದರೆ ನೀಡದಂತೆ ನಾಲ್ವರು ಮಕ್ಕಳಿಗೂ ತಾಕೀತು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ