ಅನಂತದಲ್ಲಿ ಲೀನವಾದ ಅನಂತ: ಅಗ್ನಿಸ್ಪರ್ಶಕ್ಕೆ ಕೆಲವೇ ಕ್ಷಣಗಳ ಮೊದಲು ಬಂದ ಅಮಿತ್ ಶಾ, ಎಲ್ ಕೆ ಅಡ್ವಾಣಿ

ಮಂಗಳವಾರ, 13 ನವೆಂಬರ್ 2018 (14:48 IST)
ಬೆಂಗಳೂರು: ನಿನ್ನೆಯಷ್ಟೇ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಪಾರ್ಥಿವ ಶರೀರ ಸಕಲ ಸರ್ಕಾರಿ ಗೌರವಗಳೊಂದಿಗೆ, ಬ್ರಾಹ್ಮಣ ಸಂಪ್ರದಾಯದಂತೆ ಪಂಚ ಭೂತಗಳಲ್ಲಿ ಲೀನವಾಯಿತು.

ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ಅನಂತ ಕುಮಾರ್ ಪಾರ್ಥಿವ ಶರೀರಕ್ಕೆ ಅವರ ಸಹೋದರ ನಂದ ಕುಮಾರ್ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಕುಟುಂಬಸ್ಥರು, ವಿವಿಧ ಪಕ್ಷಗಳ ರಾಜಕೀಯ ಗಣ್ಯರು ಉಪಸ್ಥಿತರಿದ್ದರು. ಅಂತಿಮ ಕ್ರಿಯೆಯ ವಿಧಿ ವಿಧಾನ ನಡೆಯುವ ವೇಳೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹಿರಿಯ ನಾಯಕ, ಅನಂತ ಕುಮಾರ್ ರಾಜಕೀಯ ಗುರು ಎಲ್ ಕೆ ಅಡ್ವಾಣಿ,  ಬಿಜೆಪಿ ರಾಷ್ಟ್ರೀಯ ಅಧ‍್ಯಕ್ಷ ಅಮಿತ್ ಶಾ,  ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಿನ್ನೆಯಿಂದ ಸಮಚಿತ್ತದಿಂದಿದ್ದು, ತಮ್ಮ ದುಃಖ ಎಲ್ಲೂ ತೋರಿಸಿಕೊಳ್ಳದ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಇಂದು ಪತಿಯ ಅಂತ್ಯಕ್ರಿಯೆಯ ವಿಧಿ ವಿಧಾನ ಆರಂಭವಾದಾಗ ದುಃಖ ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತರು.

ಪುರೋಹಿತ ಶ್ರೀನಾಥ್ ನೇತೃತ್ವದಲ್ಲಿ ಅಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಲಾಯಿತು. ಅಂತಿಮ ಕ್ರಿಯೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಂ, ಡಿವಿ ಸದಾನಂದ ಗೌಡ, ರವಿಶಂಕರ್ ಪ್ರಸಾದ್, ಸಚಿವ ಡಿಕೆ ಶಿವಕುಮಾರ್, ಶಾಸಕರಾದ ದಿನೇಶ್ ಗುಂಡೂರಾವ್, ಬಸವರಾಜ ಹೊರಟ್ಟಿ, ಆರ್ ಅಶೋಕ್, ವಿ ಸೋಮಣ್ಣ, ರವಿ ಸುಬ್ರಹ್ಮಣ್ಯ ಮುಂತಾದ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ