ಮಂಡ್ಯದಲ್ಲಿ ಮತ್ತೊಂದು ದುರಂತ; ವಿಸಿ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರ ಸಾವು

ಸೋಮವಾರ, 3 ಡಿಸೆಂಬರ್ 2018 (07:15 IST)
ಮಂಡ್ಯ : ಇತ್ತೀಚೆಗೆ ನಡೆದ ಮಂಡ್ಯದ ಪಾಂಡವಪುರ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ 30 ಜನ ಸಾವನ್ನಪ್ಪಿದ ದುರಂತದ ನೋವು ಇನ್ನು ಮಾಸಿಲ್ಲ, ಅದರ  ಬೆನ್ನಲೇ ಇದೀಗ ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಬಳಿ ನಡೆದಿದೆ.


ಲೋಕಸರ ಗ್ರಾಮದ ನಿವಾಸಿಗಳಾದ ನಾಗಮ್ಮ (50), ಅಂಬಿಕಾ (30), ಮಾನ್ಯತಾ (6) ಮೃತ ದುರ್ದೈವಿಗಳಾಗಿದ್ದು, ಭಾನುವಾರ ರಾತ್ರಿ 8.30 ರ ಸುಮಾರಿಗೆ ಲೋಕಸರ ಗ್ರಾಮದ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲೆಂದು ಅಂಬಿಕಾ, ತನ್ನ ತಾಯಿ ನಾಗಮ್ಮ ಮತ್ತು ತಂಗಿಯ ಮಗಳು ಮಾನ್ಯತಾಳನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಪೂಜೆ ಮುಗಿಸಿ ವಾಪಾಸಾಗುವ ವೇಳೆ ತಿರುವಿನಲ್ಲಿ ಆಯತಪ್ಪಿ ಮೂವರು ತುಂಬಿ ಹರಿಯುತ್ತಿದ್ದ ವಿಸಿ ನಾಲೆಯೊಳಗೆ ಬಿದ್ದಿದ್ದಾರೆ.


ಕೂಡಲೇ ಸ್ಥಳೀಯರು ಮೂವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದರು ಕೂಡ ಬಾಲಕಿ ಮಾನ್ಯತಾ ಸ್ಥಳದಲ್ಲೇ ಸಾವನ್ನಪ್ಪಿದಳು. ಹಾಗೇ ನಾಗಮ್ಮ ಹಾಗೂ ಅಂಬಿಕಾ  ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ