ಶಾಸನ ಮುನಿರತ್ನಗೂ ರಾಕ್ ಲೈನ್ ವೆಂಕಟೇಶ್, ದರ್ಶನ್ ಗೂ ಇದೆ ಪರಮಾಪ್ತತೆ: ಇವರ ಹಿನ್ನಲೆಯೇನು

Krishnaveni K

ಸೋಮವಾರ, 16 ಸೆಪ್ಟಂಬರ್ 2024 (09:17 IST)
ಬೆಂಗಳೂರು: ಗುತ್ತಿಗೆದಾರನಿಗೆ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧಿತರಾಗಿರುವ ಎಂಎಲ್ಎ ಮುನಿರತ್ನ ನಿಜಕ್ಕೂ ಯಾರು ಇವರ ಹಿನ್ನಲೆಯೇನು ಎಂಬ ವಿವರ ಇಲ್ಲಿದೆ ನೋಡಿ.

ಮುನಿರತ್ನ ಈ ಮೊದಲು ಕಾಂಗ್ರೆಸ್ ಶಾಸಕರಾಗಿದ್ದವರು ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಇದೀಗ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ 20 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಶಾಸಕ ಮುನಿರತ್ನರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ವಿರುದ್ಧ ಎಫ್ಐಅರ್ ದಾಖಲಾಗುತ್ತಿದ್ದಂತೇ ಆಂಧ್ರಕ್ಕೆ ಪರಾರಿಯಾಗಲು ಯತ್ನಿಸಿದ ಮುನಿರತ್ನರನ್ನು ಆಂಧ್ರಗಡಿಯಲ್ಲೇ ಬಂಧಿಸಲಾಗಿತ್ತು.

ಮುನಿರತ್ನ ಮೂಲತಃ ಚಿತ್ರ ನಿರ್ಮಾಪಕರು. ಹೀಗಾಗಿ ಕನ್ನಡ ಚಿತ್ರರಂಗದ ಅನೇಕ ಗಣ್ಯರೊಂದಿಗೆ ಅವರಿಗೆ ನಿಕಟ ಸಂಪರ್ಕವಿದೆ. ಅದರಲ್ಲೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಂಬಂಧಿ. ಇದೀಗ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರ ಕುರಕ್ಷೇತ್ರ ಸಿನಿಮಾವನ್ನು ನಿರ್ಮಿಸಿದ್ದರು. ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದವರು.

ಇದೇ ಮುನಿರತ್ನ ವಿರುದ್ಧ ಈ ಹಿಂದೆಯೂ ಒಮ್ಮೆ ಹಗರಣದ ಆರೋಪ ಕೇಳಿಬಂದಿತ್ತು. 2018 ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ನಕಲಿ ವೋಟರ್ ಐಡಿ ಸೃಷ್ಟಿಸಿದ ಆರೋಪದಲ್ಲಿ ಸಿಲುಕಿದ್ದರು. ಬೆಂಗಳೂರಿನ ಫ್ಲ್ಯಾಟ್ ಒಂದರಲ್ಲಿ ನಕಲಿ ವೋಟರ್ ಐಡಿ ತಯಾರಿಸಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅದಾದ ಬಳಿಕ ಮುನಿರತ್ನ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಕಳೆದ ಚುನಾವಣೆಯಲ್ಲೂ ಮತ್ತೊಮ್ಮೆ ಆರ್ ಆರ್ ನಗರದಿಂದ ಗೆದ್ದು ಶಾಸಕರಾಗಿದ್ದರು. ಇದೀಗ ಬೆದರಿಕೆ ಪ್ರಕರಣದಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣದ ಕತೆ ಏನಾಗುವುದೋ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ