ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಮೋಹನ್ ಕಾತರಕಿ

ಬುಧವಾರ, 20 ಸೆಪ್ಟಂಬರ್ 2017 (16:50 IST)
ನವದೆಹಲಿ/ಕಲಬುರ್ಗಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 28 ದಿನ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಇವತ್ತು ವಾದ ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ತೀರ್ಪು ನಮ್ಮ ಪರವಾಗಿದೆ ಎನ್ನುವ ನಿರೀಕ್ಷೆ ಇದೆ ಎಂದು ರಾಜ್ಯದ ಪರ ವಕೀಲ ಮೋಹನ್ ಕಾತರಕಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಕಾವೇರಿ ವಿಷಯದಲ್ಲಿ 28 ದಿನಗಳ ಸುದೀರ್ಘ ವಿಚಾರಣೆ ನಡೆದಿದೆ. ಈ ಮೊದಲು ಆಲಮಟ್ಟಿ ವಿಷಯದಲ್ಲಿ 22 ದಿನ ವಿಚಾರಣೆ ನಡೆದಿತ್ತು. ಇಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ತಿಳಿಸಿದ್ದು, ಸೆಕ್ಷನ್ 6ಎ ನಲ್ಲಿ ಮಂಡಳಿ ರಚನೆಯ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಒಪ್ಪಂದಗಳು, ನೀರು ಹಂಚಿಕೆ, ಬಳಕೆ ಬಗ್ಗೆ ವಾದ-ಪ್ರತಿವಾದ ನಡೆದಿದೆ. ರಾಜ್ಯದ ರೈತರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಮೋಹನ್ ಕಾತರಕಿ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ನೀಡಿರುವ ಅಭಿಪ್ರಾಯಕ್ಕೆ  ಸಂಬಂ‍ಧಪಟ್ಟಂತೆ ರಾಜ್ಯ ಜಲಸಂಪನ್ಮೂಲ ಸಚಿವ ಕಲಬುರ್ಗಿಯಲ್ಲಿ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಗೆ ಅಧಿಕಾರ ಇಲ್ಲ. ಇದು ಸಂಸತ್ ನಲ್ಲಿ ಕೈಗೊಳ್ಳಬೇಕಾದ ನಿರ್ಧಾರ. ಈಗಾಗಲೇ ಕಾವೇರಿ ನೀರು ಹಂಚಿಕೆಗೆ ಒಂದು ಸಮಿತಿ ಇದೆ. ಈಗ ಮತ್ತೊಂದು ಮಂಡಳಿ ರಚನೆ ಅನಗತ್ಯ. ಸುಪ್ರೀಂಕೊರ್ಟ್ ಅಭಿಪ್ರಾಯದಂತೆ ಮತ್ತೊಂದು ಮಂಡಳಿ ರಚನೆ ಮಾಡಿದರೆ ರಾಜ್ಯಕ್ಕೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಲಿದೆ. ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರಕ್ಕೆ ಅಧಿಕಾರ ಇರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲ್ಲವೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಂಡಳಿಯ ರಚಣೆ ಬಗ್ಗೆ ನಿಲುವು ಬದಲಿಸಿದರೆ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ