ಬೆಂಗಳೂರು: ಕಾಂಗ್ರೆಸ್ ನಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೂ ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಿದ್ದರೆ ಇತ್ತ ಬಿಜೆಪಿ-ಜೆಡಿಎಸ್ ನಲ್ಲಿ ಚುನಾವಣೆಗೆ ಮೊದಲೇ ಸಿಎಂ ಕುರ್ಚಿಗಾಗಿ ಫೈಟ್ ಶುರುವಾಗಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಸಿಎಂ ಕುರ್ಚಿ ವಿಚಾರವೇ ಸದ್ದು ಮಾಡುತ್ತಿದೆ. ಇಷ್ಟು ದಿನ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ನಡೆಯುತ್ತಿದ್ದ ಸಿಎಂ ಕುರ್ಚಿ ಫೈಟ್ ಸದ್ದು ಮಾಡುತ್ತಿತ್ತು. ಈಗ ಬಿಜೆಪಿ-ಜೆಡಿಎಸ ನಡುವಿನ ಫೈಟ್ ಸದ್ದು ಮಾಡುತ್ತಿದೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ ಇದೀಗ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿಯಿರುವಾಗ ಕೆಲವು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಒಳಗೊಳಗೇ ಕಂಡುಬರುತ್ತಿದೆ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಬಗ್ಗೆ ಕೇಳಿದಾಗ ತಮ್ಮ ತಂದೆಯ ಹೆಸರು ಹೇಳಿದ್ದು ಚರ್ಚೆ ಹುಟ್ಟುಹಾಕಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಯಲಿದೆ ಎನ್ನಲಾಗಿದೆ. ಆದರೆ ಇದರ ನಡುವೆ ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಎಂದಿರುವುದು ಬಿಜೆಪಿ ನಾಯಕರಿಗೆ ಒಳಗೊಳಗೇ ಚಿಂತೆ ಹೆಚ್ಚು ಮಾಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರು, ಕುಮಾರಣ್ಣನನ್ನು ಮೋದಿ ಗುರುತಿಸುತ್ತಾರೆ ಎಂದಿದ್ದಾರೆ. ಇತ್ತ ಆರ್ ಅಶೋಕ್ ಮೊದಲು ಚುನಾವಣೆ ಗೆಲ್ಲೋಣ ಆಮೇಲೆ ನೋಡೋಣ ಎಂದಿದ್ದಾರೆ. ಹೀಗಾಗಿ ಇವರ ಕುರ್ಚಿ ಬಡಿದಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡಬೇಕಿದೆ.