ಡಿಪೋ ಮ್ಯಾನೇಜರ್ ಕಿರುಕುಳ ಆರೋಪ: ಚಾಲಕ ಆತ್ಮಹತ್ಯೆ ಯತ್ನ

ಮಂಗಳವಾರ, 19 ಸೆಪ್ಟಂಬರ್ 2017 (11:59 IST)
ಬೆಂಗಳೂರು: ಡಿಪೋ ಮ್ಯಾನೇಜರ್ ಪ್ರಕಾಶ್ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಡಿಪೋ ನಂ. 2 ಶಾಂತಿನಗರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬಿಎಂಟಿಸಿ ಚಾಲಕ ಮಧು ಶಾಂತಿನಗರ ಡಿಪೋ ಗೇಟ್ ಬಳಿ ಜಿರಳೆ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅಸ್ವಸ್ಥಗೊಂಡಿರುವ ಚಾಲಕ ಮಧುರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ನಿನ್ನೆ ಮಧ್ಯಾಹ್ನ ಚಾಲಕ ಮಧು ಶಿಫ್ಟ್ ಗೆ ಬಂದಾಗ ಟ್ಯೂಟಿ ನೀಡದೆ, ಡಿಪೋ ಮ್ಯಾನೇಜರ್ ಪ್ರಕಾಶ್ ಮೆಮೋ ನೀಡಿದ್ದಾರೆ. ರೂಟ್ ಸಹ ಬದಲಾಯಿಸಿದ್ದು, ಸಾಲದ್ದಕ್ಕೆ ಕೊಟ್ಟ ರೂಟ್ ಮಾಡುವಂತೆ ನಿಂದಿಸಿದ್ದಾರೆ. ಇದ್ರಿಂದ ಮನನೊಂದು ಚಾಲಕ ಮಧು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಚಾಲಕರು ಮತ್ತು ಕಂಡಕ್ರರ್ ಗಳು ಆರೋಪಿಸಿದ್ದಾರೆ. ಮಧು ಆತ್ಮಹತ್ಯೆ ಹಿನ್ನೆಲೆಯಲ್ಲಿ ಶಾಂತಿನಗರ ಡಿಪೋದಿಂದ ತೆರಳಬೇಕಿದ್ದ ಎಲ್ಲಾ ಬಸ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಇಲ್ಲಿ ದುಡ್ಡು ಕೊಟ್ಟವರಿಗೆ ಅವರು ಕೇಳಿದ ರೂಟ್ ಕೊಡ್ತಾರೆ. ಇಲ್ಲದಿದ್ರೆ ಇಲ್ಲ. ಮಧು ಆತ್ಮಹತ್ಯೆಗೆ ಯತ್ನಿಸಲು ಡಿಪೋ  ಮ್ಯಾನೇಜರ್ ಪ್ರಕಾಶ್, ಮ್ಯೆಕಾನಿಕ್ ಶಿವಪ್ರಕಾಶ್ ಮತ್ತು ಟ್ರಾಫಿಕ್ ಕಂಟ್ರೋಲರ್ ಉಗ್ರಪ್ಪ ಕಾರಣ ಎಂದು ಎಐಟಿಯುಸಿ ಉಮಾ ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡದೆ ಹೋದರೆ ಪ್ರತಿಭಟನೆ ನಿಲ್ಲಿಸಲ್ಲ ಎಂದು ಆಗ್ರಹಿಸಿದರು.

ಬಳಿಕ ಪ್ರತಿಭಟನಾ ನಿರತ ಎಐಟಿಯುಸಿ ನಿರ್ವಾಹಕರು ಮತ್ತು ಚಾಲಕರ ಜತೆ ಬಿಎಂಟಿಸಿ ಟ್ರಾಫಿಕ್ ಜನರಲ್ ಮ್ಯಾನೇಜರ್ ವಿಶ್ವನಾಥ್ ಸಂಧಾನ ಸಭೆ ನಡೆಸಿದರು. ಇದೇ ವೇಳೆ ಸಿಬ್ಬಂದಿ 3 ಷರತ್ತು ವಿಧಿಸಿದ್ದು, ಇದಕ್ಕೆ ವಿಶ್ವನಾಥ್ ಸಹ ಒಪ್ಪಿಗೆ ಸೂಚಿಸಿದ್ದಾರೆ. ಮೆಕ್ಯಾನಿಕ್ ಶಿವಪ್ರಕಾಶ್ ಈ ಕೂಡಲೇ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದು, ಇಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಟ್ರಾಫಿಕ್ ಕಂಟ್ರೋಲರ್ ಉಗ್ರಪ್ಪ ಸಹ ವರ್ಗಾವಣೆ ಮಾಡಲಾಗಿದೆ.

ಇನ್ನು ಬಿಎಂಟಿಸಿ ಸೌತ್ ಡಿವಿಷನ್ ಡಿಸಿ ಇನಾಯತ್ ಬಾಗಾಬಾನ್ ಗೆ ಇಂದಿನಿಂದ ರಿಲೀವ್ ನೀಡಿದ್ದು, ಈ ಬಗ್ಗೆ ಅಧಿಕಾರಗಳ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ವಿಶ್ವನಾಥ್ ತಿಳಿಸಿದ್ದಾರೆ. ವಿಶ್ವನಾಥ್ ಆಶ್ವಾಸನೆ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದು, ಶಾಂತಿನಗರದಿಂದ ಬಸ್ ಗಳ ಸಂಚಾರ ಆರಂಭವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ