ಬೆಳಗಾವಿ: ಇಲ್ಲಿ ವಿವಿಧ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿರುವ ಸಂಘಟನೆಗಳ ಅಹವಾಲು, ಬೇಡಿಕೆ ಕುರಿತ ಮನವಿಪತ್ರಗಳನ್ನು ಸ್ವೀಕರಿಸಿದ್ದು, ಇವುಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನಿಸುವುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಸಮಾಜದ ಸ್ವಾಮೀಜಿಗಳು, ಮುಖಂಡರು ಬಂದಿದ್ದಾರೆ. ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ವಿಕಲಚೇತನರು, ಕಿವುಡರೂ ಬಂದಿದ್ದರು. ಅವರ ಮನವಿಯನ್ನೂ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.
ಕೂಡು ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಕುರಿತ ಮನವಿಯನ್ನೂ ಸ್ವೀಕರಿಸಿದ್ದೇನೆ. ಚರ್ಮಗಾರ ಸಮಾಜದ ಮನವಿಯನ್ನೂ ಸ್ವೀಕರಿಸಿದ್ದೇನೆ. ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಶಾಸಕರಾದ ಹರೀಶ್ ಪೂಂಜ, ಶೈಲೇಂದ್ರ ಬೆಲ್ದಾಳೆ ಅವರು ಸೇರಿ ಬಂದಿದ್ದೇವೆ. ಇವರೆಲ್ಲರ ಧ್ವನಿಯಾಗಿ ಸದನದಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ ಅವರು ನನ್ನ ಬಗ್ಗೆ ಹೇಳಿದ್ದನ್ನು ಒಪ್ಪಿ, ಆದರೆ, ಅವರ ವರದಿ ಒಪ್ಪುವುದಿಲ್ಲ ಎಂದರೆ ಅದು ದ್ವಿಮುಖ ನೀತಿಯಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದೇನೆ ಎಂದು ನುಡಿದರು.
ನನ್ನ ಮೇಲಿನ ಆರೋಪ, ಅನ್ವರ್ ಮಾಣಿಪ್ಪಾಡಿ ವರದಿ, ಯಾರ್ಯಾರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೋ, ಅದೆಲ್ಲದರ ಸಮಗ್ರ ತನಿಖೆ ಆಗಬೇಕು. ವಕ್ಫ್ನಲ್ಲಿ ಲೂಟಿ ಹೊಡೆದವರು ಕಾಂಗ್ರೆಸ್ ಮುಖಂಡರು. ಸಿಬಿಐನಿಂದ ಇದೆಲ್ಲದರ ಸಮಗ್ರ ತನಿಖೆ ಆಗಬೇಕೆಂದು ನಾವು ಕೂಡ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.