ಹಗರಣಗಳಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಸಿದ್ದರಾಮಯ್ಯನವರೇ: ಬಿವೈ ವಿಜಯೇಂದ್ರ ವಾಗ್ದಾಳಿ

Krishnaveni K

ಶುಕ್ರವಾರ, 12 ಜುಲೈ 2024 (15:54 IST)
ಬೆಂಗಳೂರು: ಮುಖ್ಯಮಂತ್ರಿಗಳು ಮೈಸೂರು ‘ಮುಡಾ’ ಹಗರಣದಲ್ಲಿ ಸತ್ಯಾಂಶವನ್ನು ಮರೆಮಾಚಲು ಸಾಧ್ಯವಿಲ್ಲ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಬಿಡದಿಯ ಬಳಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಹಗರಣದಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮುಖ್ಯಮಂತ್ರಿಗಳೇ ಎಂದ ಅವರು, ಇವತ್ತಲ್ಲ ನಾಳೆ ನೀವು ಸಿಬಿಐ ತನಿಖೆಗೆ ಕೊಡಬೇಕಾಗುತ್ತದೆ. ಬಿಜೆಪಿಯ ಶಾಂತಿಯುತ ಹೋರಾಟಕ್ಕೆ ಕಲ್ಲು ಹಾಕುವ ಕೆಲಸ ಮಾಡಲಾಗಿದೆ. ನಾವಾಗಲೀ, ನಮ್ಮ ಕಾರ್ಯಕರ್ತರಾಗಲೀ ಯಾವುದೇ ಕಾರಣಕ್ಕೂ ಇದರಿಂದ ಹೆದರಿಕೊಂಡು ಓಡುವ ಪ್ರಶ್ನೆಯೇ ಇಲ್ಲ. ಈ ಹೋರಾಟಕ್ಕೆ ಉತ್ತರ ಸಿಗಲೇಬೇಕು ಎಂದು ತಿಳಿಸಿದರು.
ಬಡವರಿಗೆ ಅನ್ಯಾಯ ಆಗಿದೆ. ನ್ಯಾಯ ಸಿಗಲೇ ಬೇಕಿದೆ. ಭ್ರಷ್ಟಾಚಾರದ ವಿಚಾರ ಸ್ಪಷ್ಟವಾಗಲೇಬೇಕಿದೆ.

ಎಲ್ಲಿಯವರೆಗೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೊಡುವುದಿಲ್ಲವೋ, ಸಿಎಂ ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿನವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಎಚ್ಚರಿಸಿದರು.
ಸದನದ ಒಳಗೆ ಕೂಡ ಈ ಕುರಿತು ಪ್ರಶ್ನಿಸುತ್ತೇವೆ. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ, ಪ್ರಾಮಾಣಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಾಜಿ ಸಚಿವರಾದ ಮುನಿರತ್ನ, ಶಾಸಕರಾದ ಕೃಷ್ಣಪ್ಪ, ಧೀರಜ್ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ಗೌಡ, ಶರಣು ತಲ್ಲಿಕೆರೆ, ಮುನಿರಾಜು, ಜಿಲ್ಲಾಧ್ಯಕ್ಷರಾದ ಹರೀಶ್ ಸಪ್ತಗಿರಿಗೌಡ ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ