ಎರಡು ಕ್ಷೇತ್ರವನ್ನು ಮೊಮ್ಮಕ್ಕಳಿಗೆ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಲು ಬಂದ ದೇವೇಗೌಡರ ವಿರುದ್ಧ ಕಿಡಿಕಾರಿದ ಸಿ.ಎಂ.ಲಿಂಗಪ್ಪ

ಸೋಮವಾರ, 25 ಮಾರ್ಚ್ 2019 (06:41 IST)
ರಾಮನಗರ : ಮಂಡ್ಯ , ಹಾಸನ ಎರಡು ಕ್ಷೇತ್ರವನ್ನು ಇಬ್ಬರು ಮೊಮ್ಮಕ್ಕಳಿಗೆ ಬಿಟ್ಟುಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಲು ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಕಿಡಿಕಾರಿದ್ದಾರೆ.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಮೊಮ್ಮಕ್ಕಳಿಗೆ ಎರಡು ಸ್ಥಾನ ಕೊಟ್ಟಿದ್ದೀರಿ. ಆದರೆ ಈಗ ಬೇರೆಯವರದ್ದನ್ನು ಕಿತ್ತುಕೊಂಡು ತುಮಕೂರಿಗೆ ಬಂದಿದ್ದೀರಲ್ಲ ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಎಚ್.ಡಿ.ದೇವೇಗೌಡರು 2014ರ ಚುನಾವಣೆಯಲ್ಲಿ ಇದು ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದರು. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ನಗು ನಗುತ್ತಾ ಬಿಟ್ಟುಕೊಡಲಿಲ್ಲ. ಕಣ್ಣೀರು ಹಾಕಿದರು. ಸಂಸತ್‍ಗೆ ಎಚ್.ಡಿ.ದೇವೇಗೌಡ ಅವರಿಗಿಂತ ಪ್ರಜ್ವಲ್ ಆಗಲಿ, ನಿಖಿಲ್ ಆಗಲಿ ಅನಿವಾರ್ಯವೇ..? ಯಾಕೆ ಅವರು ಮಂಡ್ಯ ಇಲ್ಲವೇ, ಹಾಸನದಿಂದ ಸ್ಪರ್ಧಿಸಬಾರದು ಎಂದು ಕೇಳಿದ್ದಾರೆ.


ತುಮಕೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ಅವರ ಸ್ಪರ್ಧೆಯನ್ನು ನಾವು ಒಪ್ಪಿಕೊಳ್ಳಬೇಕಾ? ಇಲ್ಲವೇ ವಿರೋಧಿಸಬೇಕೇ? ನಾನು ಆತ್ಮವಂಚನೆ ಮಾಡಿಕೊಂಡು ಮಾತನಾಡುವುದಿಲ್ಲ. ರಾಷ್ಟ್ರಮಟ್ಟದ ರಾಜಕಾರಣಕ್ಕೆ ದೇವೇಗೌಡರು ಅನಿವಾರ್ಯ. ಹೀಗಾಗಿ ಒಬ್ಬ ಮೊಮ್ಮಗನಿಗೆ ಅನುಭವ ಬರಲಿ ಎಂದು ದೇವೇಗೌಡರು ತಿಳುವಳಿಕೆ ಹೇಳಿ, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಹುದಿತ್ತು ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ