ದಸರಾ ಶುಭಾಶಯದಲ್ಲೂ ನಿಮ್ಮ ದರಿದ್ರ ರಾಜಕೀಯ ಬಿಡಲ್ವಲ್ಲಾ: ಸಿದ್ದರಾಮಯ್ಯ ಸಂದೇಶಕ್ಕೆ ನೆಟ್ಟಿಗರ ತರಾಟೆ

Krishnaveni K

ಶನಿವಾರ, 12 ಅಕ್ಟೋಬರ್ 2024 (10:36 IST)
ಬೆಂಗಳೂರು: ನಾಡಹಬ್ಬದ ದಸರಾ ಹಬ್ಬಕ್ಕೆ ಶುಭಾಶಯ ಕೋರುವಾಗ ರಾಜಕೀಯ ಬೆರೆಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ಶುಭ ಸಂದರ್ಭದಲ್ಲೂ ನಿಮ್ಮ ದರಿದ್ರ ರಾಜಕೀಯ ಬಿಡಲ್ವಾ ಎಂದಿದ್ದಾರೆ.

ನಾಡಹಬ್ಬ ದಸರಾ ಹಬ್ಬಕ್ಕೆ ಪತ್ರಿಕಾ ಜಾಹೀರಾತು ನೀಡುವಾಗ ಸಿಎಂ ಸಿದ್ದರಾಮಯ್ಯ ಜನಪರವಾಗಿರುವ ಸರ್ಕಾರವನ್ನು ದುಷ್ಟರಿಂದ ರಕ್ಷಿಸಲಿ ಎಂದು ಸಂದೇಶ ಬರೆಯಲಾಗಿತ್ತು. ಇದರ ಬಗ್ಗೆ ಬಿಜೆಪಿ ಮೊದಲು ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಟ್ವೀಟ್ ಮಾಡಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು.

ನಾವು ಯಾವುದೇ ಪಕ್ಷ, ವ್ಯಕ್ತಿಗಳ ಹೆಸರನ್ನು ಜಾಹೀರಾತಿನಲ್ಲಿ ಉಲ್ಲೇಖಿಸಿಲ್ಲ. ಆದರೂ ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದಸರಾದಂತಹ ಶುಭ ಹಬ್ಬದ ಸಂದರ್ಭದಲ್ಲೂ ನಿಮ್ಮ ದರಿದ್ರ ರಾಜಕೀಯ ಬಿಡಲಿಲ್ಲವಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ. ಮತ್ತೆ ಕೆಲವರು ಹಾಗಿದ್ದರೆ ಮುಡಾ, ವಾಲ್ಮೀಕಿ ನಿಗಮದಲ್ಲಿ ಹಗರಣ ಮಾಡಿದವರಿಗೂ ಆ ದೇವಿ ಶಿಕ್ಷೆ ನೀಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಿದ್ದರೂ ಇಂದೂ ಕೂಡಾ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ವಿಜಯದಶಮಿಗೂ ಸಿದ್ದರಾಮಯ್ಯ ಅಂತಹದ್ದೇ ಸಂದೇಶ ಬರೆದು ಶುಭ ಹಾರೈಸಿದ್ದಾರೆ. ಸುಳ್ಳು, ಅಧರ್ಮ, ಅನ್ಯಾಯದ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಲು ಪ್ರೇರಣೆಯಾಗಲಿ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ