ಕೇಂದ್ರದ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕಕ್ಕೆ ಎಷ್ಟು ಹಣ ಬಂದಿತ್ತು ಲೆಕ್ಕ ಕೊಡಿ

Krishnaveni K

ಶುಕ್ರವಾರ, 11 ಅಕ್ಟೋಬರ್ 2024 (15:38 IST)
ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಎಷ್ಟು ಹಣವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದರು ಎಂಬ ಅಂಕಿಅಂಶ ಬಿಡುಗಡೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಹಣವನ್ನು ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಡುಗಡೆ ಮಾಡಿದ್ದೀರೆಂದು ಅಂಕಿಅಂಶ ಕೊಡಬೇಕು. ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಕೇಂದ್ರ ಸರಕಾರವು ಎಷ್ಟು ಹಣಕಾಸು ನೀಡಿದೆ ಎಂಬುದನ್ನು ನಾವೂ ಬಿಡುಗಡೆಗೊಳಿಸಲು ಸಿದ್ಧ ಎಂದು ಸವಾಲು ಹಾಕಿದರು. ನಮ್ಮ ಸರಕಾರವು ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷದ ಸರಕಾರಕ್ಕಿಂತ ಹೆಚ್ಚು ಹಣ ನೀಡಿದೆ. ಯಾವುದೇ ಅನ್ಯಾಯ ಆಗಿಲ್ಲ ಎಂದು ತಿಳಿಸಿದರು.

ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಕೊಡುವ ಹಣವನ್ನು ಹೋಲಿಸಿ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ರಾಜ್ಯ ಕೇಳುವ ಮಾತನಾಡಿದ್ದಾರೆ. ತೆರಿಗೆ ಪಾಲು ಕೊಡುವುದರಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಡಿ.ಕೆ.ಸುರೇಶ್ ಮಾಡುವ ಆರೋಪ ಸರಿಯಲ್ಲ; ಇದು ಖಂಡನೀಯ ಎಂದರು.
ಕೇಂದ್ರದಲ್ಲಿ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ. ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರಕಾರ ಇದ್ದಾಗ ಕರ್ನಾಟಕಕ್ಕೆ ಎಷ್ಟು ತೆರಿಗೆ ಪಾಲು ಕೊಡುತ್ತಿದ್ದರು; ಎಷ್ಟು ಹಣ ಕೊಡಲಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕವೂ ಒಂದೇ, ಬಿಹಾರವೂ ಒಂದೇ, ಕರ್ನಾಟಕವೂ ಒಂದೇ, ಒಡಿಶಾವೂ ಒಂದೇ, ಕರ್ನಾಟಕವೂ ಒಂದೇ, ಉತ್ತರ ಪ್ರದೇಶವೂ ಒಂದೇ ಎಂಬಂತೆ ಕೇಂದ್ರದ ಆಗಿನ ಸರಕಾರಗಳು ನಡೆದುಕೊಳ್ಳುತ್ತಿದ್ದವು ಎಂದರು.
 
ಕ್ಯಾಬಿನೆಟ್ ನಿರ್ಣಯ- ತೀವ್ರ ಆಕ್ಷೇಪ
ದುಷ್ಟ ಶಕ್ತಿಗಳ ವಿರುದ್ಧ ಸತ್ಯಕ್ಕೆ ಜಯ ಎಂದು ಪೇಪರ್‍ನಲ್ಲಿ ನೋಡಿದ್ದೇನೆ. ದುಷ್ಟ ಶಕ್ತಿಗಳು ಯಾರು? ಹುಬ್ಬಳ್ಳಿಯಲ್ಲಿ 16-4-2022ರಂದು ಕಿಡಿಗೇಡಿಯೊಬ್ಬ ಒಂದು ವಾಟ್ಸಪ್ ಮೆಸೇಜ್‍ನಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಿದ್ದಾನೆಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರು ಆತನನ್ನು ಬಂಧಿಸಿದ್ದರು. ಅವನನ್ನು ತಮ್ಮ ಕೈಗೆ ಒಪ್ಪಿಸಲು ಆಗ್ರಹಿಸಿ, ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದರು. ಎಲ್ಲ ಅಲ್ಪಸಂಖ್ಯಾತರ ಬಗ್ಗೆ ಈ ಮಾತಲ್ಲ ಎಂದರು.

ಮರುದಿನ ಸಾವಿರಾರು ಜನ ಸೇರಿ ಮೆರವಣಿಗೆ ಮಾಡಿ, ಪೊಲೀಸ್ ಜೀಪಿನ ಮೇಲೆ ಹತ್ತಿ ಇಸ್ಲಾಂ ಧರ್ಮದ ಧ್ವಜ ಹಾರಿಸಿದ್ದರು. ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿದ್ದರು. ಅನೇಕ ಜನ ಪೊಲೀಸರಿಗೂ ಗಾಯಗಳಾಗಿದ್ದವು. ಆ ದಿನ ಅರ್ಧ ಹುಬ್ಬಳ್ಳಿ ಬಂದ್ ಆಗಿತ್ತು. ಇಂಥ ಘಟನೆಯನ್ನು ಸಹಜವಾಗಿ ತೆಗೆದುಕೊಂಡು ನಿನ್ನೆ ಕ್ಯಾಬಿನೆಟ್ ಒಳಗೆ ಎಫ್‍ಐಆರ್ ರದ್ದು ಮಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇದೆಯೇ ಎಂದು ಪ್ರಶ್ನಿಸಿದರು.

ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸುಟ್ಟು ಹಾಕಿದ್ದರು. ಅಂಥ ಕೇಸುಗಳನ್ನು ವಾಪಸ್ ತೆಗೆದುಕೊಳ್ಳಲು ಈ ಸರಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ವಿಷಯವನ್ನು ಗಂಭೀರವಾಗಿ ಪರಿಣಿಸುವುದಿಲ್ಲ.

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಭಯೋತ್ಪಾದಕರನ್ನು ಮೈ ಬ್ರದರ್ಸ್ ಎನ್ನುವ ಈ ಸರಕಾರವು, ನಿನ್ನೆ ಕ್ಯಾಬಿನೆಟ್ ಒಳಗೆ ಪೊಲೀಸ್ ಜೀಪಿಗೆ ಕಲ್ಲೆಸೆದ, ಪೊಲೀಸ್ ಜೀಪ್ ಸುಟ್ಟುಹಾಕಿದ ದುಷ್ಕರ್ಮಿಗಳ, ಭಯೋತ್ಪಾದಕರ, ಉಗ್ರಗಾಮಿಗಳ ಕೇಸನ್ನು ವಾಪಸ್ ಪಡೆದುದನ್ನು ಬಿಜೆಪಿ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ; ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು.

ಆ ಕೇಸನ್ನು ಮತ್ತೆ ಅವರ ಮೇಲೆ ಹಾಕಿ ಬಂಧಿಸುವಂತೆ ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯಾಧ್ಯಕ್ಷರು, ಪಕ್ಷದ ಪ್ರಮುಖರು ಕೆಲವೇ ದಿನಗಳಲ್ಲಿ ಮಾತನಾಡಿ ಇದರ ಕುರಿತು ಹೋರಾಟ ರೂಪಿಸುತ್ತೇವೆ ಎಂದು ತಿಳಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ