ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದಾ ಎಂಬ ಆತಂಕ ಪೋಷಕರಲ್ಲಿ ಶುರುವಾಗಿದೆ. ಇದೀಗ ಸಚಿವ ದಿನೇಶ್ ಗುಂಡೂರಾವ್ ಗುಡ್ ನ್ಯೂಸ್ ನೀಡಿದ್ದಾರೆ.
ಸದ್ಯಕ್ಕೆ ಕರ್ನಾಟಕದಲ್ಲಿ 46 ಸಕ್ರಿಯ ಕೇಸ್ ಗಳಿವೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಶಾಲೆ, ಕಾಲೇಜುಗಳನ್ನು ಬಂದ್ ಮಾಡಬಹುದು ಎಂಬ ಆತಂಕ ಪೋಷಕರಲ್ಲಿತ್ತು. ಕಳೆದ ಬಾರಿ ಕೊವಿಡ್ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ಆನ್ ಲೈನ್ ತರಗತಿಗಳಾಗಿದ್ದರಿಂದ ಆಗಿದ್ದ ಅಧ್ವಾನಗಳನ್ನು ವಿದ್ಯಾರ್ಥಿಗಳು, ಪೋಷಕರು ಇನ್ನೂ ಮರೆತಿಲ್ಲ.
ಇದರ ನಡುವೆ ಶಾಲೆ ಆರಂಭ ಮುಂದೂಡಿಕೆಯಾಗಬಹುದು. ಈಗಾಗಲೇ ಆರಂಭವಾಗಿದ್ದರೆ ಬಂದ್ ಆಗಬಹುದು ಎಂಬ ಆತಂಕವನ್ನು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೂರ ಮಾಡಿದ್ದಾರೆ.
ಸದ್ಯಕ್ಕೆ 47 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಗಂಭೀರ ಎನ್ನುವ ಪರಿಸ್ಥಿತಿಯಲ್ಲಿಲ್ಲ. ಯಾರೂ ಐಸಿಯುವಿಗೆ ಅಡ್ಮಿಟ್ ಆಗುವಂತಹ ಪರಿಸ್ಥಿತಿಯಿಲ್ಲ. ಹೀಗಾಗಿ ಆತಂಕ ಬೇಡ. ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನನಗೆ ಅನಿಸುತ್ತಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬರಬಾರದು, ರಾಜ್ಯದೊಳಗೆ ಓಡಾಡಬಾರದು ಎಂದೆಲ್ಲಾ ಕಠಿಣ ನಿಯಮ ಹಾಕುವ ಅಗತ್ಯ ಕಂಡುಬಂದಿಲ್ಲ.
ಗರ್ಭಿಣಿಯರು, ವಯೋವೃದ್ಧರು, ರೋಗ ನಿರೋಧಕ ಶಕ್ತಿ ಇರುವವರು, ಚಿಕ್ಕಮಕ್ಕಳಿಗೆ, ಜನ ಹೆಚ್ಚಿರುವ ಪ್ರದೇಶಗಳಿಗೆ ಹೋಗುವಾಗ ಮಾಸ್ಕ್ ಕಡ್ಡಾಯ ಮಾಡಿದರೆ ಸಾಕು. ಸದ್ಯಕ್ಕೆ ಶಾಲೆ, ಕಾಲೇಜು ಮುಚ್ಚಬೇಕು ಎಂಬ ಚಿಂತನೆಯಿಲ್ಲ. ಕೇಂದ್ರದಿಂದಲೂ ಶಾಲೆ ಬಂದ್ ಮಾಡಲು ಸೂಚನೆ ಬಂದಿಲ್ಲ. ಇಂದು ಸಭೆ ನಡೆಸಲಿದ್ದೇವೆ. ಇನ್ನೂ ಮೂರು-ನಾಲ್ಕು ದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಶಾಲೆ, ಕಾಲೇಜು ಬಂದ್ ಮಾಡುವ ಯೋಚನೆಯಿಲ್ಲ ಎಂದಿದ್ದಾರೆ.