ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ಇದೀಗ ನಿರ್ಣಾಯಕ ಘಟಕ್ಕೆ ಬಂದು ತಲುಪಿದೆ. ಭಾರೀ ಕುತೂಹಲ ಮೂಡಿಸಿದ ದೂರುದಾರ ಗುರುತಿಸಿದ 'ಸ್ಪಾಟ್ ಸಂಖ್ಯೆ 13'ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್(ಜಿಪಿಆರ್) ತಂತ್ರಜ್ಞಾನ ಬಳಸಿ ತೀವ್ರ ಶೋಧ ನಡೆಸುತ್ತಿದೆ.ಕಳೆದ 2 ಗಂಟೆಯಿಂದ ಎರಡು ಜೆಸಿಪಿ ಯಂತ್ರದಿಂದ ಮಣ್ಣನ್ನು ಹೊರತೆಗೆಯಲಾಗುತ್ತಿದೆ.
ಮೂಲಗಳ ಪ್ರಕಾರ, ಸ್ಥಳವನ್ನು ಸ್ಕ್ಯಾನ್ ಮಾಡಲು ಮತ್ತು ಭೂಮಿಯಲ್ಲಿ ಹೂತುಹೋಗಿರುವ ಯಾವುದೇ ವಸ್ತುಗಳನ್ನು ಪತ್ತೆಹಚ್ಚಲು ಎಸ್ಐಟಿ ರಾಡಾರ್ ಇಮೇಜಿಂಗ್ ಹೊಂದಿದ ಹೆಚ್ಚಿನ ಸಾಮರ್ಥ್ಯದ ಡ್ರೋನ್ ಅನ್ನು ಸಹ ನಿಯೋಜಿಸಿದೆ.
ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳದ ಸುತ್ತ ಮಾತ್ರವಲ್ಲದೇ, ನೇತ್ರಾವತಿ ಅಜಿಕುರಿ ರಸ್ತೆಯ ಸುಮಾರು ನೂರು ಮೀಟರ್ ಗೂ ಅಧಿಕ ದೂರದ ವರೆಗೂ ರಸ್ತೆ ಬದಿಯಲ್ಲಿ ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ನಡೆಸಲಾಗಿದೆ.
ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಸ್ಐಟಿ ಹಿರಿಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಅನಾಮಿಕ ದೂರುದಾರ ಬಹಳ ಸ್ಪಷ್ಟವಾಗಿ ಹೆಣ ಹೂತಿದ್ದೇನೆ ಎಂದು ಹೇಳಿದ ಕಾರಣಕ್ಕಾಗಿ ಎಸ್ ಐಟಿಯು ಈಗಾಗಲೇ ಆತ ಗುರುತಿಸಿ 12 ಸ್ಥಳಗಳನ್ನು ಅಗೆದಿದೆ. ಆದರೆ ಅಸ್ಥಿಪಂಜರದ ಕುರುಹು ಕೇವಲ 1 ಕಡೆ ಮಾತ್ರ ಸಿಕ್ಕಿದೆ. ಿನ್ನು 13ನೇ ಪಾಯಿಂಟ್ನಲ್ಲಿ ಇಂದು ಶೋಧ ಕಾರ್ಯ ನಡೆಸಲಾಗುತ್ತಿದೆ.