ಬಿಜೆಪಿ ಸಂಸದರು, ಓರ್ವ ಮಾಜಿ ಸಿಎಂ ನಮ್ಮ ಸಂಪರ್ಕದಲ್ಲಿದ್ದಾರೆ: ಡಿಕೆ ಶಿವಕುಮಾರ್ ಬಾಂಬ್

Krishnaveni K

ಗುರುವಾರ, 14 ಮಾರ್ಚ್ 2024 (10:13 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೇ ಬಿಜೆಪಿ ಪಾಳಯದಲ್ಲಿ ಅಸಮಾಧಾನವೂ ಸ್ಪೋಟಗೊಂಡಿದೆ. ಈ ಹಿನ್ನಲೆಯಲ್ಲಿ ಓರ್ವ ಮಾಜಿ ಸಿಎಂ ಮತ್ತು 3 ಹಾಲಿ ಸಂಸದರು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ.

ನಿನ್ನೆಯಷ್ಟೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪೈಕಿ 9 ಮಂದಿ ಸಂಸದರಿಗೆ ಕೊಕ್ ನೀಡಲಾಗಿದೆ. ಕೆಲವರು ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮತ್ತೆ ಕೆಲವರು ಪಕ್ಷದ ನಿರ್ಧಾರವನ್ನು ಒಪ್ಪಿಕೊಂಡು ಸಂದೇಶ ಬರೆದುಕೊಂಡಿದ್ದಾರೆ.

ಆದರೆ ಈಗ ಅಸಮಾಧಾನಿತ 3 ಸಂಸದರು ಮತ್ತು ಓರ್ವ ಮಾಜಿ ಸಿಎಂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಡಿಕೆಶಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಮಾಜಿ ಸಿಎಂ ಡಿವಿ ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳಿತ್ತು. ಹೀಗಾಗಿ ಅವರೇ ಆ ಮಾಜಿ ಸಿಎಂ ಇರಬಹುದೇ ಎಂಬ ಅನುಮಾನ ಮೂಡಿದೆ.

ಯಾರು ನಮ್ಮ ಸಂಪರ್ಕದಲ್ಲಿದ್ದೇವೆ ಎಂಬುದು ರಹಸ್ಯವಾಗಿದ್ದು, ಅದನ್ನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಬಿಜೆಪಿ ಚುನಾವಣೆ ಬಳಿಕದ ಮಾತನಾಡುತ್ತಿದೆ. ಆದರೆ ನಾವು ಈಗಲೇ ಅವರಿಗೆ ಕ್ಲೈಮ್ಯಾಕ್ಸ್ ತೋರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ