ಗಂಗೆ ಯಾರಪ್ಪನ ಸೊತ್ತಲ್ಲ, ನಾನು ಕುಂಭಮೇಳಕ್ಕೆ ಹೋಗಿಯೇ ಹೋಗ್ತೇನೆ: ಡಿಕೆ ಶಿವಕುಮಾರ್

Krishnaveni K

ಬುಧವಾರ, 5 ಫೆಬ್ರವರಿ 2025 (14:29 IST)
ಬೆಂಗಳೂರು: ಕುಂಭಮೇಳಕ್ಕೆ ಹೋಗಲು ಸಿದ್ಧರಾಗಿರುವ ಡಿಸಿಎಂ ಡಿಕೆ ಶಿವಕುಮಾರ್, ಗಂಗೆ ಯಾರಪ್ಪನ ಸೊತ್ತೂ ಅಲ್ಲ, ನಾನು ಕುಂಭಮೇಳಕ್ಕೆ ಹೋಗಿಯೇ ಹೋಗುತ್ತೇನೆ ಎಂದಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತಾ ಎಂದು ಲೇವಡಿ ಮಾಡಿದ್ದರು. ಇದು ಭಾರೀ ಟೀಕೆಗೊಳಗಾಗಿತ್ತು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗುವುದಾಗಿ ಹೇಳಿದ್ದರು.

ಡಿಕೆಶಿ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಗೆ ಹೇಳಿಕೆ ಉಲ್ಲೇಖಿಸಿ ಬಿಜೆಪಿ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದರು. ಡಿಕೆಶಿ ಕುಂಭಮೇಳಕ್ಕೆ ಹೋದರೆ ಪಾಪ ಪರಿಹಾರವಾಗುತ್ತಾ ಎಂದು ಕಾಲೆಳೆದಿದ್ದರು. ಈಗ ಅದಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ಕುಂಭಮೇಳಕ್ಕೆ ಹೋಗುವುದು ನನ್ನ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ನಂಬಿಕೆ, ಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ನಂಬಿಕೆಗಳಿರುತ್ತವೆ. ಗಂಗೆ, ಕಾವೇರಿ, ಕೃಷ್ಣ, ಬ್ರಹ್ಮಪುತ್ರ ನದಿಗಳು ಯಾರಪ್ಪನ ಸೊತ್ತೂ ಅಲ್ಲ. ಹಾಗಾದರೆ ಅಶೋಕ್ ಯಾಕೆ ಅಶೋಕ್ ಎಂದು ಹೆಸರಿಟ್ಟುಕೊಂಡಿದ್ದಾರೆ? ಕಲ್ಲು ಮಣ್ಣು ಎಂದು ಇಡಬಹುದಿತ್ತಲ್ಲವೇ? ನನ್ನ ಬಗ್ಗೆ ಟೀಕಿಸುವ ಅಶೋಕ್ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಡಿಕೆಶಿ ಹರಿಹಾಯ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ