ನನಗೆ ನಾನೇ ಶತ್ರು, ಅಸೂಯೆಯೇ ಸೋಲಿಗೆ ಕಾರಣವೆಂದ ಡಿ.ಕೆ. ಸುರೇಶ್‌

Sampriya

ಸೋಮವಾರ, 10 ಜೂನ್ 2024 (15:16 IST)
ರಾಮನಗರ: ನನಗೆ ಯಾರೂ ಹಿತಶತ್ರುಗಳಿಲ್ಲ ನನಗೆ ನಾನೇ ಶತ್ರು. ನಾನೂ ಒಂದು ವಿರಾಮ ನಿರೀಕ್ಷೆ ಮಾಡಿದ್ದೆ. ಈಗ ವಿರಾಮ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು, ಅಸೂಯೆ ನನ್ನ ಸೋಲಿಗೆ ಕಾರಣ ಎಂದು ಬೆಂಗಳೂರು ಗ್ರಾಮಾಂತರದಲ್ಲಿ ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.

ರಾಮನಗರದಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ‌ ಮಾಡಿದ್ದೇನೆ. ರಾಜಕೀಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಉಪ‌ಚುನಾವಣೆ ನಡೆದಾಗ ಜಿಲ್ಲೆ ಹಾಗೂ ರಾಜ್ಯದ ನಾಯಕರು ನನ್ನನ್ನು ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಡಿ.ಕೆ. ‌ಶಿವಕುಮಾರ್ ಅವರಿಗೆ ಒತ್ತಡ ತಂದು ನಾಯಕರು ನನಗೆ ಅವಕಾಶ ಕೊಟ್ಟಿದ್ದರು ಸುರೇಶ್ ಹೇಳಿದರು.

ನಾನು ಸಂಸದನಾಗಿದ್ದಾಗ ಎಂಟು ತಿಂಗಳು ಕಾಲ ಯುಪಿಎ ಸರ್ಕಾರ ಇತ್ತು. ಆಗ ನನಗೆ ಕೆಲಸ ಮಾಡಲಾಗಿದ್ದು ಕೇವಲ 5 ತಿಂಗಳು ಮಾತ್ರ. ತದನಂತರ ಎನ್​ಡಿಎ ಸರ್ಕಾರ ಬಂತು. ಎರಡು ಬಾರಿಯೂ ಸಂಸತ್ ಸದಸ್ಯನಾಗಿ ಸದನದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನಾನು ಚುನಾವಣೆಗೆ 4 ಬಾರಿ ನಿಂತಾಗ, ಕನ್ನಡಿಗರ ತೆರಿಗೆ ಬಗ್ಗೆ ಧ್ವನಿ ಎತ್ತಿ ಇಡೀ ರಾಷ್ಟ್ರದಲ್ಲಿ ಟೀಕೆ ಎದುರಿಸಿದ್ದೇನೆ ಎಂದರು.

ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಅಂತ ಕೇಳಿದ್ದೇನೆ. ಜನ ಸಾರಸಗಟಾಗಿ ಅದನ್ನು ತಿರಸ್ಕಾರ ಮಾಡಿದ್ದಾರೆ. ಆ ಸೋಲನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ. ನಾನು ಹೊಸದಾಗಿ ಬಂದಾಗ ಜನ ಕೆಲಸ ಮಾಡ್ತಾರೆ ಅಂತ ಗೆಲ್ಲಿಸಿದ್ರು. ಡಾಕ್ಟರ್ ಬಂದಾಗ ಡಾಕ್ಟರ್ ಅವರನ್ನೂ ಗೆಲ್ಲಿಸಿದ್ದಾರೆ. ಅವರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸುರೇಶ್ ಅವರ ಹೆಸರು ಮುಂಚೂಣಿಯಲ್ಲಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್‌, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ