ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮಾತು ಕೊಟ್ಟಂತೆ ನಡೆದಿಲ್ಲ. ಅಧಿಕಾರಕ್ಕೆ ಬಂದ ದಿನವೇ ಸಾರಿಗೆ ನೌಕರರ ಬಗ್ಗೆ ಆಡಿದ್ದನ್ನು ಮರೆತಿದ್ದಾರೆ. ಸಾರಿಗೆ ನೌಕರರ ವಿಚಾರದಲ್ಲಿ ನಾನೂ ಸದನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೆ. ನೌಕರರ ಸಮಸ್ಯೆ ಪರಿಹರಿಸುವುದಾಗಿ ಸರಕಾರವೂ ತಿಳಿಸಿತ್ತು ಎಂದು ಅವರು ನುಡಿದರು.
ಇದು ಕಿವುಡ, ಕುರುಡ, ಮೂಕರ ಸರಕಾರ ಎಂದು ಟೀಕಿಸಿದ ಅವರು, ಖಜಾನೆ ತುಂಬಿ ತುಳುಕುತ್ತಿದೆ ಎನ್ನುತ್ತಾರೆ. ಹಾಗಿದ್ದರೆ ಸಮಸ್ಯೆ ಪರಿಹಾರ ಮಾಡಿಲ್ಲವೇಕೆ? ಎಂದರು. ತಲಾದಾಯದಲ್ಲೂ ನಂಬರ್ 1 ಆಗಿದ್ದೇವೆ. ಆದರೂ, ಯಾಕೆ ನ್ಯಾಯ ಕೊಡಲು ಆಗುತ್ತಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಬಿಜೆಪಿ ಈ ನೌಕರರ ಪರವಾಗಿ ಧ್ವನಿಯಾಗಿ ನಿಲ್ಲಲಿದೆ. ಸದನದಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇವೆ ಎಂದು ನುಡಿದರು.