ಬೆಂಗಳೂರು: ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಹಾಗೂ ಕೊಂಬೆಗಳನ್ನು ತೆರವುಗೊಳಿಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಶುಕ್ರವಾರ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನೂ ಮರಗಳನ್ನು ಕಡಿಯುವ ಮುನ್ನಾ ಸಾರ್ವಜನಿಕರಲ್ಲಿ ಈಶ್ವರ್ ಖಂಡ್ರೆ ಅವರು ವಿಶೇಷ ಮನವಿಯನ್ನು ಮಾಡಿದರು.
ಆಮ್ಲಜನಕ ಎಲ್ಲರಿಗೂ ಬೇಕಾಗಿದ್ದು, ಆದರೆ ತಮ್ಮ ಮನೆ ಮುಂದೆ ಮಾತ್ರ ಮರ ಬೇಡ ಅಂತ ಹೇಳ್ತಾರೆ. ಏಕೆಂದರೆ, ಬಿದ್ದ ಎಲೆಗಳು ಕಸವನ್ನು ಉಂಟುಮಾಡುತ್ತವೆ. ಕೆಲವರು ಮನೆಯ ಸೌಂದರ್ಯವನ್ನು ಅಥವಾ ಅಂಗಡಿ ಫಲಕಗಳನ್ನು ನಿರ್ಬಂಧಿಸುವ ಕಾರಣ ಮರಗಳನ್ನು ಕಡಿಯುತ್ತಾರೆ. ಮರಗಳ ಬುಡದ ಸುತ್ತಲೂ ಕಾಂಕ್ರೀಟ್ ಹಾಕಬೇಡಿ ಅಥವಾ ಅಕ್ರಮವಾಗಿ ಕಡಿಯಬೇಡಿ ಎಂದು ಮನವಿ ಮಾಡಿದರು.
ವ್ಯಕ್ತಿಯೊಬ್ಬ ಆರಾಮವಾಗಿ ಉಸಿರಾಡಲು 7 ಮರಗಳು ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ, ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿದೆ ಮತ್ತು ಇಲ್ಲಿ ಏಳು ಜನರಿಗೆ ಒಂದು ಮರವೂ ಇಲ್ಲ. ಆದ್ದರಿಂದ, ಮರಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಲ್ಲರೂ ಮುಂದೆ ಬರಬೇಕು ಎಂದು ಅವರು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2,041 ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ. ಇವುಗಳಲ್ಲಿ, ಕಳೆದ ಎರಡು ವರ್ಷಗಳಲ್ಲಿಯೇ, ಸುಮಾರು 4,000 ಕೋಟಿ ರೂ. ಮೌಲ್ಯದ 128 ಎಕರೆಗಳನ್ನು ಅತಿಕ್ರಮಣದಾರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.