ಎಸ್ಸೆಸ್ಸೆಲ್ಸಿ ಫಲಿತಾಂಶ ಬೆನ್ನಲ್ಲೇ ಕಾಲೇಜುಗಳಿಗೆ ವಿದ್ಯಾರ್ಥಿಗಳ ದೌಡು

ಬುಧವಾರ, 11 ಆಗಸ್ಟ್ 2021 (08:38 IST)
ಬೆಂಗಳೂರು (ಆ.11):  ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಗಳವಾರದಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳತ್ತ ಧಾವಿಸಿ ಲಭ್ಯ ಕೋರ್ಸುಗಳ ಮಾಹಿತಿ ಪ್ರವೇಶ ಶುಲ್ಕದ ಮಾಹಿತಿ ಪಡೆದಿದ್ದು ಕಂಡುಬಂತು.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರುದಿನದಿಂದಲೇ ಪಿಯು ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಿಸಬಹುದೆಂದು ಕಳೆದ ಜು.23ರಂದು ಪಿಯು ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಇದೀಗ ಮಂಗಳವಾರ ಪ್ರವೇಶ ಪ್ರಕ್ರಿಯೆಗೆ ಸಂಬಂಧ ವಿವರವಾದ ವೇಳಾಪಟ್ಟಿಪ್ರಕಟಿಸಿ ಆ.10ರಿಂದ 31ರವರೆಗೆ ದಂಡ ಶುಲ್ಕವಿಲ್ಲದೆ ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. 670 ರು. ದಂಡ ಶುಲ್ಕದೊಂದಿಗೆ ಸೆ.1ರಿಂದ 11ರವರೆಗೆ ಹಾಗೂ 2890 ರು. ವಿಶೇಷ ದಂಡ ಶುಲ್ಕದೊಂದಿಗೆ ಸೆ.13ರಿಂದ 25ರವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಆ.16ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಆರಂಭಿಸಲು ಕೂಡ ಇಲಾಖೆ ಸೂಚಿಸಿದೆ.
ಪ್ರವೇಶಕ್ಕೆ ಒತ್ತಡ:  ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಎಲ್ಲಾ 8.71 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಉತ್ತೀರ್ಣಗೊಂಡಿರುವುದರಿಂದ ಸಹಜವಾಗಿಯೇ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕೆ ಭಾರೀ ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶೇ.71.80ರಷ್ಟುಫಲಿತಾಂಶದೊಂದಿಗೆ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಪಿಯು ಪ್ರವೇಶಕ್ಕೆ ಅರ್ಹರಾಗಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 2.5 ಲಕ್ಷ ಮಕ್ಕಳು ಅರ್ಹರಾಗಿದ್ದಾರೆ. ಸರ್ಕಾರ ಪಿಯು ಕಾಲೇಜುಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಸೀಟುಗಳು ಪ್ರವೇಶಕ್ಕೆ ಲಭ್ಯವಿದೆ ಎಂದು ಹೇಳಿದ್ದರೂ ಹೆಚ್ಚು ಬೇಡಿಕೆ ಇರುವ ವಾಣಿಜ್ಯ, ವಿಜ್ಞಾನ ಕೋರ್ಸುಗಳು ಎಲ್ಲ ಕಾಲೇಜುಗಳಲ್ಲೂ ಇಲ್ಲದಿರುವುದು ಒತ್ತಡಕ್ಕೆ ಕಾರಣವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ