ಮಾಲೀಕನ ದೌರ್ಜನ್ಯಕ್ಕೆ ಕುಟುಂಬ ಬೀದಿ ಪಾಲು

ಭಾನುವಾರ, 9 ಸೆಪ್ಟಂಬರ್ 2018 (19:20 IST)
ಕಳೆದ 24 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬವೊಂದು, ಜಮೀನು ಮಾಲೀಕನ ದೌರ್ಜನ್ಯಕ್ಕೆ ಏಕಾ ಏಕಿ ನಡುರಾತ್ರಿಯಲ್ಲಿ ಬೀದಿಗೆ ಬಂದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಗ್ರಾಮದಲ್ಲಿ, ಅಮಾನುಷ ಘಟನೆಗೆ ಸಾಕ್ಷಿಯಾಗಿದೆ. ಗ್ರಾಮಕ್ಕೆ ಕಳೆದ 24 ವರ್ಷದ ಹಿಂದೆ ಲಕ್ಷ್ಮಮ್ಮ ಹಾಗೂ ಕುಟುಂಬ, ಉದ್ಯೋಗ ಅರಸಿ ಇಲ್ಲಿಗೆ ಬಂದು ನೆಲೆಸಿತ್ತು. ಆದ್ರೆ ಕೆಲ ವರ್ಷಗಳ ಹಿಂದೆ ಇವರ ಮನೆಯಿದ್ದ ಜಮೀನಿನ ಮಾಲೀಕ, ಭೂಮಿಯನ್ನು ಪರಭಾರೆ ಮಾಡಿದ್ದಾರೆ. ಹೀಗಾಗಿ ಜಮೀನನ್ನು ಖರೀದಿಸಿದ ಮಾಲೀಕ, ಏಕಾ ಏಕಿ ಪೊಲೀಸರನ್ನ ಬಳಸಿಕೊಂಡು, ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಯುವತಿಯ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಪೊಲೀಸರ ದೌರ್ಜನ್ಯಕ್ಕೆ ಇಡೀ ಕುಟುಂಬ, ಇದ್ದ ಸೂರನ್ನು ಕಳೆದುಕೊಂಡು ಮಹಿಳೆಯರು ಮಕ್ಕಳೆನ್ನದೆ, ರಾತ್ರಿ ಚಳಿ ಗಾಳಿಯಲ್ಲಿ ಕಾಲ ಕಳೆಯುವಂತಾಗಿದೆ. ಮನೆಯಲ್ಲಿದ್ದ ಸಂಪೂರ್ಣ ಸಾಮಾಗ್ರಿಗಳನ್ನು ಪೊಲೀಸರೇ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಇನ್ನೂ ಮಾದನಾಯಕನಹಳ್ಳಿ ಪೊಲೀಸರ ಈ ನಡೆ ಮಾನವೀಯತೆ ಮರೆತಂತಿದ್ದು, ಪೊಲೀಸರ ಕ್ರಮಕ್ಕೆ ಕುಟುಂಬ ವರ್ಗದವರು ಹಿಡಿಶಾಪ ಹಾಕಿದ್ದಾರೆ. ಇನ್ನೂ ಜಮೀನು ವಿವಾದ ಇದ್ದ ಕಾರಣ ಮಾದನಾಯಕನಹಳ್ಳಿ ಪೊಲೀಸರು ಮನೆಯರನ್ನ ತೆರವು ಮಾಡಿದ್ದಾರೆ ಎನ್ನಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ