ನಿದ್ರಿಸಲು ಬಿಡದ ಮಗನ ಉಸಿರನ್ನೇ ನಿಲ್ಲಿಸಿದ ತಂದೆ

Krishnaveni K

ಶುಕ್ರವಾರ, 1 ಮಾರ್ಚ್ 2024 (10:29 IST)
ಧಾರವಾಡ: ಮಕ್ಕಳು ಹಠ ಮಾಡುವುದು, ಅಳುವುದು ಸಾಮಾನ್ಯ. ಪೋಷಕರಾದವರು ಮಕ್ಕಳನ್ನು ಸಾಮಾಧಾನಿಸಿ, ಮುದ್ದು ಮಾಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಮಗು ಅಳುತ್ತದೆ ಎಂದು ಅದರ ಜೀವವನ್ನೇ ತೆಗೆದಿದ್ದಾನೆ.

ಮಲಗಿದಾಗ ಅತ್ತು ರಂಪ ಮಾಡುತ್ತದೆ ಎಂದು ಒಂದು ವರ್ಷದ ಮಗುವನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಧಾರವಾಡದ ಯಾದವಾಡ ಗ್ರಾಮದಲ್ಲಿ ನಡೆದಿದೆ. 1 ವರ್ಷದ ಹೆಣ್ಣು ಮಗು ಶ್ರೇಯಾ ಸಾವನ್ನಪ್ಪಿದವಳು. ಆರೋಪಿ ಶಂಭುಲಿಂಗಯ್ಯ (38) ಎಂಬಾತ ಪಾಪಿ ತಂದೆ.

ಮಂಗಳವಾರ ರಾತ್ರಿ ಘಟನೆ ನಡೆದಿದೆ. ಕೂಲಿ ಕೆಲಸ ಮಾಡುವ ಶಂಭುಲಿಂಗಯ್ಯ ರಾತ್ರಿ ಪತ್ನಿ ಜೊತೆ ಜಗಳವಾಡಿದ್ದ. ಬಳಿಕ ಮಲಗಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಗು ಅಳಲಾರಂಭಿಸಿದೆ. ಅದರ ಅಳುವಿನ ಕಿರಿ ಕಿರಿಗೆ ಕೋಪಗೊಂಡ ಆರೋಪಿ ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಪತ್ನಿ ಜೊತೆಗಿನ ಕಲಹದ ಆಕ್ರೋಶದಲ್ಲೇ ಆರೋಪಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಅಪ್ಪ-ಅಮ್ಮನ ಜಗಳಕ್ಕೆ ಏನೂ ಅರಿಯದ ಮುಗ್ಧ ಕಂದಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ. ಈ ಹೃದಯ ವಿದ್ರಾವಕ ಘಟನೆ ಇಡೀ ಗ್ರಾಮಸ್ಥರಿಗೆ ಶಾಕ್ ತಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ