ನೇಣಿಗೆ ಶರಣಾದ ಅರಣ್ಯ ರಕ್ಷಕ ಕುಟುಂಬ

ಸೋಮವಾರ, 21 ಫೆಬ್ರವರಿ 2022 (18:16 IST)
ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದ ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿಗೆ ಸಮೀಪದ ಬಿರುನಾಣಿಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಯುವರಾಜ್ (25) ಮತ್ತು ಪತ್ನಿ ಶಿಲ್ಪಾ (22) ಇಹಲೋಕ ತ್ಯಜಿಸಿದವರಾಗಿದ್ದಾರೆ.
ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವರಾಜ್ ಕಳೆದ 10 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ವಾಸವಾಗಿದ್ದರು.
ಭಾನುವಾರ ಸಂಜೆ ಕರ್ತವ್ಯ ಮುಗಿಸಿ ಯುವರಾಜ್ ಮನೆಗೆ ಬಂದಾಗ ಪತ್ನಿ ಶಿಲ್ಪಾ ವೇಲ್’ನಿಂದ ಬಾತ್ ರೂಮ್’ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದ್ದು, ಇದನ್ನು ನೋಡಿ ಮನೆ ಮಾಲಕ ಸತ್ಯ ಅವರನ್ನು ಕರೆದು ಮೃತದೇಹವನ್ನು ಇಬ್ಬರೂ ಸೇರಿ ಇಳಿಸಿದ್ದಾರೆ.
ಈ ವಿಷಯವನ್ನು ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಿದ್ದ ಯುವರಾಜ್, ಸ್ವಲ್ಪ ಸಮಯದಲ್ಲೇ ಬಾತ್ ರೂಮ್’ಗೆ ಹೋಗಿ ಪತ್ನಿ ನೇಣು ಬಿಗಿದು ಕೊಂಡಿದ್ದ ವೇಲ್’ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೊಡಗು ವನ್ಯಜೀವಿ ಎ. ಸಿ.ಎಫ್.ದಯಾನಂದ್, ಶ್ರೀಮಂಗಲ ಆರ್.ಎಫ್.ಓ.ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ