ಹಿಂದೆಯೂ ಒಂದೇ ಚುನಾವಣೆ ನಡೆದಿತ್ತು: ಕೆ.ಅಣ್ಣಾಮಲೈ

Krishnaveni K

ಶುಕ್ರವಾರ, 11 ಜುಲೈ 2025 (21:19 IST)
ಬೆಂಗಳೂರು: ಒಂದು ದೇಶ- ಒಂದು ಚುನಾವಣೆ ಎಂಬುದು ದಿಢೀರ್ ಆಗಿ ಮಾಡಿದ ಪರಿಕಲ್ಪನೆಯಲ್ಲ; 1952ರಿಂದ 1967ರವರೆಗೆ ಇದು ಜಾರಿಯಲ್ಲಿತ್ತು. ಬಳಿಕ ಈ ಕುರಿತಂತೆ ಚರ್ಚೆಯೂ ನಡೆದಿತ್ತು ಎಂದು ತಮಿಳುನಾಡು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಿಳಿಸಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಇಂದು “ಮತ್ತಿಕೆರೆಯ ಐ.ಐ.ಎಸ್.ಸಿ”ಯಲ್ಲಿ ಏರ್ಪಡಿಸಿದ ಸಂವಾದದಲ್ಲಿ ಅವರು ಮಾತನಾಡಿದರು. ದೇಶವು ವೇಗವಾಗಿ ಬೆಳವಣಿಗೆ ಸಾಧಿಸಬೇಕಿದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲೂ ಸುಧಾರಣೆ ಅಗತ್ಯವಿದೆ ಎಂದು ಅವರು ನುಡಿದರು.

ಹಿಂದಿನ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಒಂದೇ ಚುನಾವಣೆ ಸಾಧ್ಯಾಸಾಧ್ಯತೆ ಕುರಿತು ಅದು ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸಿತ್ತು. ಅರ್ಧದಲ್ಲೇ ಒಂದು ಸರಕಾರ ಅಧಿಕಾರ ಕಳಕೊಂಡರೆ ಏನು ಮಾಡಬೇಕೆಂಬ ವಿಷಯದಲ್ಲೂ ಕೋವಿಂದ್ ಅವರ ಸಮಿತಿ ಶಿಫಾರಸನ್ನು ನೀಡಿದೆ ಎಂದು ಹೇಳಿದರು. 1980- 90ರ ನಡುವಿನ ಅವಧಿಯಲ್ಲಿ ಹೆಚ್ಚು ಸರಕಾರಗಳ ಪತನ ಆಗಿತ್ತು. 2000ನೇ ಇಸವಿಯ ಬಳಿಕ ಅದು ಕಡಿಮೆಯಾಗುತ್ತ ಸಾಗಿದೆ ಎಂದು ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಇದೀಗ ಸಂಸತ್ತಿನ ಸಂಸದರ ಸಂಖ್ಯೆಯೂ 543ರಿಂದ ಹೆಚ್ಚಾಗಲಿದೆ. ಮಹಿಳೆಯರಿಗೆ ಶೇ 33 ಮೀಸಲಾತಿಯೂ ಇರಲಿದೆ. ಜೊತೆಗೇ ಒಂದೇ ಚುನಾವಣೆಯೂ ಬರಬೇಕಿದೆ. 1971ರ ಜನಗಣತಿ ಪ್ರಕಾರ ಬೆಂಗಳೂರಿನ ಸಂಸದರ ಸಂಖ್ಯೆ 3 ಇದೆ. ಬೆಂಗಳೂರು ಈಗ ಸುಮಾರು 3 ಕೋಟಿ ಜನರನ್ನು ಹೊಂದಿ ದೊಡ್ಡ ನಗರವಾಗಿದೆ. ಸಹಜವಾಗಿ ಬೆಂಗಳೂರಿನ ಸಂಸದರ ಸಂಖ್ಯೆ ಐದೋ, ಆರೋ, ಏಳೋ ಆಗಬಹುದು ಎಂದು ತಿಳಿಸಿದರು.
 
ಇವಿಎಂ ಮತದಾನದ ವಿಷಯದಲ್ಲೂ ಕೇಸ್
ಸಂವಾದದಲ್ಲಿ ಉತ್ತರ ನೀಡಿದ ಅಣ್ಣಾಮಲೈ ಅವರು, ಇವಿಎಂ ಮತದಾನದ ವಿಚಾರದಲ್ಲೂ ಸುಪ್ರೀಂ ಕೋರ್ಟಿನಲ್ಲಿ ಕೇಸಿದೆ. ಇವಿಎಂ ಯಂತ್ರಕ್ಕೆ ಬ್ಲೂಟೂತ್ ಆಗಲೀ ವೈಫೈ ಆಗಲೀ ಇಲ್ಲ; ಅದರ ಸಂಬಂಧವೇ ಕೆಲವು ರಾಜಕೀಯ ಪಕ್ಷಗಳು ಕೋರ್ಟಿನ ಮೊರೆ ಹೋಗಿವೆ ಎಂದರು.
ಮಹಾರಾಷ್ಟ್ರ ಚುನಾವಣೆ ಸಂಬಂಧವೇ ಇದೇ ರೀತಿ ಹೇಳಲಾಗಿದೆ. ಸೋತ ಪಕ್ಷವು ಕಾರಣ ಹೇಳುವುದು ಸಹಜ. ಜಿಮ್‍ಗೆ ಹೋದವರು ಬಾಡಿ ಬರ್ತಾ ಇಲ್ಲ; ಉಪಕರಣ ಸರಿ ಇಲ್ಲ ಎಂದ ಹಾಗಾಗಿದೆ ಎಂದು ವಿಶ್ಲೇಷಿಸಿದರು.
 
ಕರ್ನಾಟಕದಲ್ಲಿ ಶೇ 44ರಷ್ಟು ನಗರವಾಸಿಗಳಿದ್ದಾರೆ. ತಮಿಳುನಾಡಿನಲ್ಲಿ ಶೇ 50ರಷ್ಟು ನಗರವಾಸಿಗಳು. ಸಹಜವಾಗಿ ಸಂಸದರ ಸಂಖ್ಯೆಯೂ ಶೇ 50-50 ಆಗಲಿದೆ ಎಂದು ವಿವರಿಸಿದರು. ಈಗ ತಮಿಳುನಾಡಿನಲ್ಲಿ ಶೇ 85 ಗ್ರಾಮೀಣ ಪ್ರದೇಶದ ಸಂಸದರಿದ್ದು, ಶೇ 15ರಷ್ಟು ನಗರ ಪ್ರದೇಶದ ಸಂಸದರಿದ್ದಾರೆ ಎಂದರು. ಈಗ ಶೇ 85ರಷ್ಟು ಗ್ರಾಮೀಣ ಪ್ರದೇಶಗಳಿಂದ ಆಯ್ಕೆಯಾದ ಸಂಸದರಿದ್ದು, ಉಳಿದ ಕೇವಲ ಶೇ 15ರಷ್ಟು ಸಂಸದರು ನಗರ ಪ್ರದೇಶದವರು. ಕ್ಷೇತ್ರಗಳ ಪುನರ್ ವಿಂಗಡಣೆ ಆದಾಗ ನಗರ ಪ್ರದೇಶದ ಹೆಚ್ಚು ಸಂಸದರು ಇರಲಿದ್ದಾರೆ ಎಂದು ವಿಶ್ಲೇಷಿಸಿದರು.

1983ರಲ್ಲೇ ಚುನಾವಣಾ ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಒಂದು ದೇಶ ಒಂದು ಚುನಾವಣೆ ಅಗತ್ಯ ಎಂದು ತಿಳಿಸಿತ್ತು. 1990ರಲ್ಲಿ ಕಾನೂನು ಆಯೋಗವು ಒಂದೇ ಚುನಾವಣೆ ಕುರಿತು ತಿಳಿಸಿತ್ತು. 2015ರಲ್ಲಿ ಸಂಸತ್ತಿನ ಸಾರ್ವಜನಿಕ ಕುಂದುಕೊರತೆ ಸಮಿತಿಯು ಇದೇ ವಿಚಾರವನ್ನು ಹೇಳಿತ್ತು. 2017ರಲ್ಲಿ ನೀತಿ ಆಯೋಗವು ಶ್ವೇತಪತ್ರ ಹೊರಡಿಸಿ ಒಂದು ದೇಶ- ಒಂದು ಚುನಾವಣೆ ಪದ್ಧತಿಯಿಂದ ಆಗುವ ಪ್ರಯೋಜನಗಳ ಕುರಿತು ವಿವರ ಕೊಟ್ಟಿತ್ತು ಎಂದರು. 2018ರಲ್ಲಿ ಕಾನೂನು ಆಯೋಗವು ಮತ್ತೊಮ್ಮೆ ಇದೇ ಅಭಿಪ್ರಾಯ ಮಂಡಿಸಿತ್ತು ಎಂದು ಹೇಳಿದರು.

2019ರಲ್ಲಿ ಚುನಾವಣಾ ಆಯೋಗವು ಇದೇ ಸಂಬಂಧ ಸರ್ವಪಕ್ಷಗಳ ಸಭೆ ನಡೆಸಿತ್ತು. ಇದರಲ್ಲಿ 19 ಪಕ್ಷಗಳು ಭಾಗವಹಿಸಿದ್ದವು. ಬಿಜೆಪಿ, ಎನ್‍ಸಿಪಿ, ಜೆಡಿಯು ಸೇರಿದಂತೆ 16 ಪಕ್ಷಗಳು ಒಂದು ದೇಶ ಒಂದು ಚುನಾವಣೆ ಆಗಲಿ ಎಂದಿದ್ದವು ಎಂದು ತಿಳಿಸಿದರು. ಕಮ್ಯುನಿಸ್ಟ್ ಪಕ್ಷ, ಆರ್‍ಎಸ್‍ಪಿ, ಎಐಎಂಐಎಂ- ಹೀಗೆ ಮೂರು ಪಕ್ಷಗಳ ವಿರೋಧವಿತ್ತು ಎಂದರು.

1957ರಲ್ಲೂ ಒಂದು ದೇಶ ಒಂದು ಚುನಾವಣೆ ಪದ್ಧತಿಯೇ ಇತ್ತು. 1962ರಲ್ಲೂ ಸಂಸದರ ಆಯ್ಕೆ ಮತ್ತು ರಾಜ್ಯದ ವಿಧಾನಸಭೆಗಳಿಗೆ ಶಾಸಕರ ಆಯ್ಕೆಗಾಗಿ ಒಂದೇ ಬಾರಿ ಚುನಾವಣೆ ನಡೆದಿತ್ತು. 1967ರಲ್ಲೂ ಇದೇ ಪದ್ಧತಿ ಮುಂದುವರೆದಿತ್ತು. 1952ರಿಂದ 1967ರವರೆಗೆ ಒಂದು ರಾಷ್ಟ್ರ ಒಂದು ಚುನಾವಣೆಯ ಪದ್ಧತಿ ನಮ್ಮ ದೇಶದಲ್ಲಿತ್ತು ಎಂದು ನುಡಿದರು.
 
1969ರಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಒಳಜಗಳವಿತ್ತು. ಒಂದು ಬಣದಲ್ಲಿ ಇಂದಿರಾ ಗಾಂಧಿ, ಇನ್ನೊಂದು ಬಣದಲ್ಲಿ ಕಾಮರಾಜ್ ಮತ್ತಿತರರು ಇದ್ದರು. ಆಗ ಕಾಂಗ್ರೆಸ್ ಎರಡು ಪಕ್ಷಗಳಾಗಿ ಒಡೆಯಿತು. ಕಾಂಗ್ರೆಸ್ (ಒ), ಕಾಂಗ್ರೆಸ್ (ಆರ್) ರಚನೆ ಆಗಿತ್ತು. 1970ರಲ್ಲಿ ಇಂದಿರಾ ಗಾಂಧಿಯವರು 15 ತಿಂಗಳ ಅಧಿಕಾರ ಇನ್ನೂ ಬಾಕಿ ಇರುವಾಗಲೇ ಸಂಸತ್ತನ್ನು ವಿಸರ್ಜಿಸಿದ್ದರು. 1972ರಲ್ಲಿ ಚುನಾವಣೆ ನಡೆಯಬೇಕಿದ್ದರೂ 1970ರ ಡಿಸೆಂಬರ್‍ನಲ್ಲೇ ಅವರು ಸಂಸತ್ತನ್ನು ವಿಸರ್ಜಿಸಿದ್ದರಿಂದ ಒಂದು ಚುನಾವಣಾ ವ್ಯವಸ್ಥೆಯಲ್ಲಿ ಏರುಪೇರಾಯಿತು ಎಂದು ತಿಳಿಸಿದರು.
 
ಕಾಂಗ್ರೆಸ್ಸೇತರ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ..
1968-69 ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 7 ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿದ್ದವು. 1967ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಬದಲು ಡಿಎಂಕೆ ಅಧಿಕಾರ ಪಡೆದಿತ್ತು. ಇದೇ ಅವಧಿಯಲ್ಲಿ ಅವುಗಳ ಆಡಳಿತವನ್ನು ರದ್ದು ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಇದರಿಂದ 1971ರಲ್ಲಿ ಸಂಸತ್ತಿಗೆ ಹಾಗೂ ಹಲವು ರಾಜ್ಯಗಳ ವಿಧಾನಸಭೆಗೆ 1972ರಲ್ಲಿ ಚುನಾವಣೆ ನಡೆಯುವಂತಾಯಿತು. ನಂತರ ತುರ್ತು ಪರಿಸ್ಥಿತಿಯನ್ನೂ ದೇಶ ಕಂಡಿತ್ತು ಎಂದು ವಿವರಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮಿಳುನಾಡು ರಾಜ್ಯ ಸೇರಿ 9 ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು ಎಂದರು. 
 
ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಎಲ್ಲ ಕಡೆ ಚರ್ಚೆ ನಡೆದಿದೆ ಎಂದ ಅವರು, 140 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಮತದಾನ ಪದ್ಧತಿ ಇಲ್ಲ. ಕಮ್ಯುನಿಸ್ಟ್ ಪಕ್ಷದ ಆಡಳಿತ ಅಲ್ಲಿದೆ ಎಂದು ವಿವರಿಸಿದರು. ಕಳೆದ 46 ವರ್ಷಗಳಲ್ಲಿ 23 ವರ್ಷಗಳ ಕಾಲ ಚೀನಾವು ಎರಡಂಕಿ (10ಕ್ಕಿಂತ ಹೆಚ್ಚು) ಬೆಳವಣಿಗೆ ದಾಖಲಿಸಿದೆ. ಯುರೋಪ್ ಒಕ್ಕೂಟ, ಲ್ಯಾಟಿನ್ ಅಮೆರಿಕ ಮೊದಲಾದ ಕಡೆ
ಪ್ರಜಾಸತ್ತಾತ್ಮಕ ವ್ಯವಸ್ಥೆ ಅವನತಿ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.

ಮತದಾನದ ಪ್ರಮಾಣ ಕಡಿಮೆ ಆಗುತ್ತಿದೆ. ಯುವಜನರಲ್ಲಿ ಮತದಾನದ ಉತ್ಸಾಹ ಇಲ್ಲವಾಗಿದೆ. ಆದರೆ, ಭಾರತದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಇದೆ. 2024ರಲ್ಲಿ 90 ಕೋಟಿ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು. ಲೋಕಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಶೇ 81 ಮತದಾನ ನಡೆದಿತ್ತು ಎಂದರು.

ಜೀವಂತ ದಾಖಲೆಯಾದ ಸಂವಿಧಾನ ಇನ್ನೂ ನಮ್ಮಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಭಾರತದಲ್ಲಿ 1952ರಲ್ಲಿ ಮೊದಲ ಚುನಾವಣೆ ನಡೆದಿದ್ದು, ಸುಶಿಕ್ಷಿತರು, ಶಿಕ್ಷಣ ಇಲ್ಲದವರು, ಗ್ರಾಮೀಣ ಜನತೆ, ನಗರವಾಸಿ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಒಂದು ಮತದ ಹಕ್ಕು ನಮ್ಮಲ್ಲಿ ನೀಡಲಾಗಿತ್ತು ಎಂದು ವಿವರಿಸಿದರು. ಪ್ರಧಾನಿಯಂತೆ ಕೂಲಿ ಕಾರ್ಮಿಕನಿಗೆ ಒಂದು ಮತ ಹಾಕುವ ಹಕ್ಕನ್ನು ಕೊಡಲಾಗಿದೆ. 1952ರಲ್ಲಿ ವಿಧಾನಸಭೆಗಳು, ಲೋಕಸಭೆಗೆ ಒಂದೇ ಬಾರಿ ಚುನಾವಣೆ ನಡೆದಿತ್ತು ಎಂದು ತಿಳಿಸಿದರು. ಆಗ 489 ಸಂಸದರಿದ್ದು, ಈಗ 543 ಸಂಸದರಿದ್ದಾರೆ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ