ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಅರ್ಧನಾರೇಶ್ವರನನ್ನು ಆಯ್ಕೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ವ್ಯಂಗ್ಯ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿವೈ ವಿಜಯೇಂದ್ರ ನಮ್ಮ ಪಕ್ಷದಲ್ಲಿ ಯಾರನ್ನಾದರೂ ಅಧ್ಯಕ್ಷ ಮಾಡ್ತೀವಿ, ಅದು ನಿಮಗೆ ಬೇಡದ ವಿಷಯ ಎಂದಿದ್ದಾರೆ.
ಬಿ.ಕೆ ಹರಿಪ್ರಸಾದ್ ಅವರೇ, ನಮ್ಮ ಸ್ಥಾನ-ಮಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಭಾರತೀಯ ಜನತಾ ಪಾರ್ಟಿಯಲ್ಲಿ 'ಕಾರ್ಯಕರ್ತ' ಎಂಬುದೇ ಬಹುದೊಡ್ಡ ಹುದ್ದೆ, ಅದಕ್ಕಿಂತ ದೊಡ್ಡ ಸ್ಥಾನಮಾನ ಮತ್ತೊಂದು ಇಲ್ಲ ಎಂದು ಭಾವಿಸುವುದೇ ನಮ್ಮ ಪಕ್ಷ ನಮಗೆ ಕಲಿಸಿಕೊಟ್ಟಿರುವ ಶಿಸ್ತು ಹಾಗೂ ಸಂಸ್ಕಾರ, ಈ ಕಾರಣಕ್ಕಾಗಿಯೇ ನಮಗೆ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಸಮರ್ಪಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಆದಿವಾಸಿ ಬುಡಕಟ್ಟು ಮೂಲದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಸಂವಿಧಾನದ ಆಶಯ ಪ್ರಜಾಪ್ರಭುತ್ವದ ಸುಂದರತೆಯನ್ನು ವಿಶ್ವಕ್ಕೆ ಪಸರಿಸಿದ ಹೆಗ್ಗಳಿಕೆ ನಮ್ಮದು. ಶ್ರೀಮತಿ ನಿರ್ಮಲ ಸೀತಾರಾಮನ್ ರವರಂತಹ ಸಮರ್ಥ ವಿತ್ತ ಸಚಿವೆಯನ್ನು ದೇಶಕ್ಕೆ ಕೊಟ್ಟ ಹೆಮ್ಮೆ ನಮ್ಮದು, ಇಂತಹ ಉದಾಹರಣೆಗಳು ಸಾಲು, ಸಾಲು ನಮ್ಮ ಮುಂದಿದೆ, ಭವಿಷ್ಯತ್ತಿನಲ್ಲಿ ನಾರಿಯರು ,ಅರ್ಧನಾರಿಯರು ಯಾರೇ ಇರಲಿ ಅವರಿಗಾಗಿ ಅವಕಾಶದ ಬಾಗಿಲು ಭಾರತೀಯ ಜನತಾ ಪಾರ್ಟಿಯಲ್ಲಿ ಸದಾ ತೆರೆದಿರುತ್ತದೆ.
ನೀವು ವ್ಯಂಗ್ಯವಾಡಿ ಅಪಮಾನಿಸಿದ ನಾರಿಯರು, ಅರ್ಧ ನಾರಿಯರು ಭವಿಷ್ಯತ್ತಿನಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶಗಳು ಇರುವುದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಿಮ್ಮ ನಾಲಿಗೆಯಿಂದ ಹೊರ ಬಿದ್ದಿರುವ ಮಾತುಗಳು ಮಹಿಳೆಯರು ಹಾಗೂ ಮಂಗಳಮುಖಿಯರಿಗಷ್ಟೇ ಅಪಮಾನಿಸಿಲ್ಲ ಅದು ಭಾರತದ ಸಂಸ್ಕೃತಿಯನ್ನೂ ಅವಹೇಳನ ಮಾಡಿದಂತಾಗಿದೆ. ಈ ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆ ಯಾಚಿಸಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.