ಕೇರಳಕ್ಕಿಂತಲೂ ಕರ್ನಾಟಕಕ್ಕೇ ಭೂಕುಸಿತದ ಅಪಾಯ ಹೆಚ್ಚು: ಹೀಗೇ ಆದರೆ ಅನಾಹುತ ಗ್ಯಾರಂಟಿ

Krishnaveni K

ಶನಿವಾರ, 3 ಆಗಸ್ಟ್ 2024 (10:54 IST)
ಬೆಂಗಳೂರು: ಇತ್ತೀಚೆಗೆ ವಯನಾಡಿನಲ್ಲಿ ನಡೆದ ಗುಡ್ಡ ಕುಸಿತ ದುರಂತ ಎಲ್ಲರನ್ನೂ ಕಂಗೆಡೆಸಿದೆ. ಗುಡ್ಡ ಕುಸಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 300 ದಾಟಿದೆ. ಇನ್ನೂ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಎಷ್ಟೋ ಜನ ಮಣ್ಣಿನಡಿಯಲ್ಲಿ ಸಮಾಧಿಯಾಗಿದ್ದಾರೆ. ಮತ್ತೆ ಕೆಲವರು ಆಪ್ತರನ್ನು ಕಳೆದುಕೊಂಡು ಕಂಗೆಟ್ಟು ಕುಳಿತಿದ್ದಾರೆ. ತಮ್ಮ ಮನೆ, ಮಠ ಕಳೆದುಕೊಂಡು ಮುಂದೇನು ಎಂಬ ಭವಿಷ್ಯದ ಚಿಂತೆಯಲ್ಲಿದ್ದಾರೆ. ಆದರೆ ಮನುಷ್ಯ ಮಾಡುವ ತಪ್ಪುಗಳಿಗೆ ಪ್ರಕೃತಿಗೆ ಕಲಿಸಿದ ಪಾಠದ ಸ್ಯಾಂಪಲ್ ಅಷ್ಟೇ.

ಹಾಗೆ ನೋಡಿದರೆ ಗುಡ್ಡ ಕುಸಿತದ ಭೀತಿ ಮುಂದಿನ ದಿನಗಳಲ್ಲಿ ಕೇರಳಕ್ಕಿಂತ ಕರ್ನಾಟಕಕ್ಕೇ ಹೆಚ್ಚು. ಇತ್ತೀಚೆಗಿನದ ದಿನಗಳಲ್ಲಿ ಬೆಟ್ಟ ಗುಡ್ಡ ಪ್ರದೇಶಗಳು ಭಾರೀ ಮಳೆ ಬಂದರೆ ಸಾಕು ಕುಸಿದು ಅಪಾಯ ತಂದೊಡ್ಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಮಾನವನ ತಪ್ಪುಗಳೇ ಕಾರಣ.

ಬೆಟ್ಟ-ಗುಡ್ಡಗಳನ್ನು ಕಡಿದು ಮನೆ, ರೆಸಾರ್ಟ್, ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿಯೇ ಮಳೆಗಾಲದಲ್ಲಿ ಮಣ್ಣು ಸಡಿಲಗೊಂಡು ಕುಸಿತವಾಗುತ್ತಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ಪ್ರದೇಶಗಳು ಹೆಚ್ಚಿವೆ. ಈಗ ಇಲ್ಲೆಲ್ಲಾ ಒಂದಲ್ಲಾ ಒಂದು ಕಾಮಗಾರಿಗಳು ನಡೆಯುತ್ತಲೇ ಇವೆ.

ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ಅಪಾಯ ತಪ್ಪಿದ್ದಲ್ಲ. ವಯನಾಡಿನ ಘಟನೆಯನ್ನು ಎಚ್ಚರಿಕೆಯ ಕರೆಗಂಟೆ ಎಂದು ಪರಿಗಣಿಸಿ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ಕರ್ನಾಟಕದಲ್ಲೂ ಇಂತಹ ಗುಡ್ಡ ಕುಸಿತಗಳು ಸಾಮಾನ್ಯವಾಗಬಹುದು. ಎತ್ತಿನಹೊಳೆ ಎಂಬ ಯೋಜನೆಯಿಂದ ಇತ್ತೀಚೆಗೆ ಶಿರಾಡಿ ಘಾಟಿಯಲ್ಲಿ ಸಂಭವಿಸುತ್ತಿರುವ ಭೂ ಕುಸಿತಗಳು ಇದರ ಮುನ್ಸೂಚನೆಯಾಗಿದೆ.

ಶಿರೂರು, ವಯನಾಡು ಗುಡ್ಡ ಕುಸಿತ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈಗ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ಗಳ ತೆರವಿಗೆ ಸೂಚನೆ ನೀಡಿದೆ. ಈ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಇದು ಕೇವಲ ಆದೇಶಕ್ಕಷ್ಟೇ ಸೀಮಿತವಾಗದೇ ಅರಣ್ಯ ಉಳಿಸುವುದರತ್ತ ನಿಜವಾಗಿಯೂ ಕ್ರಮ ಕೈಗೊಳ್ಳುವಂತಾಗಲಿ ಎಂಬುದೇ ನಮ್ಮ ಹಾರೈಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ