ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಮಳೆಯಿಲ್ಲ. ಬೆಂಗಳೂರು ಹವಾಮಾನ ಯಾಕೆ ಹೀಗಿದೆ? ಯಾವಾಗ ಮಳೆ ಬರುತ್ತದೆ ಇಲ್ಲಿದೆ ವಿವರ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ನೆರೆ ಸದೃಶ ವಾತಾವರಣವಿದೆ. ಸಾವು, ನೋವುಗಳಾದ ವರದಿಗಳಾಗಿವೆ. ಇಂದೂ ಕೂಡಾ ಕರಾವಳಿ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆಯಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಮೋಡಕವಿದ ವಾತಾವರಣವಿರಲಿದೆ. ಕಳೆದ ವಾರ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿ ಅವಾಂತರ ಸೃಷ್ಟಿಯಾಗಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ತುಂತುರು ಮಳೆಯಷ್ಟೇ ಆಗುತ್ತಿದೆ. ಉಳಿದಂತೆ ದಿನವಿಡೀ ದಟ್ಟ ಮೋಡಕವಿದ ವಾತಾವರಣವಿರುತ್ತಿದೆ.
ಇಂದೂ ಕೂಡಾ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಎರಡು ದಿನಗಳವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ಇಂದೂ ಕೂಡಾ ಭಾರೀ ಮಳೆ ಸಾಧ್ಯತೆ ಕಡಿಮೆ. ಸದ್ಯಕ್ಕೆ ಮುಂಗಾರು ಮಳೆ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಜಿಲ್ಲೆಗಳಿಗೆ ಮಾತ್ರ ಹೆಚ್ಚು ಪರಿಣಾಮ ಬೀರಲಿದೆ. ಬೆಂಗಳೂರಿಗೆ ಇದು ಅಷ್ಟಾಗಿ ತಟ್ಟಿಲ್ಲ. ಹೀಗಾಗಿ ಇಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಷ್ಟೇ ಕಂಡುಬರುತ್ತಿದೆ.