ಬೆಂಗಳೂರು: ಇಂದು ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಭಾರೀ ಸದ್ದು ಮಾಡಿದ್ದ ಜನಿವಾರ ತೆಗೆಸಿದ ಬ್ರಾಹ್ಮಣ ವಿದ್ಯಾರ್ಥಿಯ ಫಲಿತಾಂಶ ಏನಾಗಿದೆ ಗೊತ್ತಾ? ಇಲ್ಲಿದೆ ವಿವರ.
ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ವೇಳೆ ಜನಿವಾರ ತೆಗೆಸಿದ ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಫಲಿತಾಂಶವನ್ನೂ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಈ ವಿದ್ಯಾರ್ಥಿಗೆ 2 ಲಕ್ಷದ 6 ಸಾವಿರ ರಾಂಕ್ ಬಂದಿದೆ. ಆತನ ಪೋಷಕರಿಂದ ಲಿಖಿತ ರೂಪದಲ್ಲಿ ಅಭಿಪ್ರಾಯ ಪಡೆದಿದ್ದು ಅದರ ಅನ್ವಯ ಸರಾಸರಿ ಅಂಕ ಹಂಚಿಕೆ ಮಾಡಿ ರಾಂಕ್ ನೀಡಲಾಗಿದೆ ಎಂದಿದ್ದಾರೆ.
ಈ ಘಟನೆ ನಡೆದಿದ್ದು ಉದ್ದೇಶಪೂರ್ವಕವಾಗಿ ಅಲ್ಲ. ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ. ಆ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ. ಯಾವುದೇ ಅನ್ಯಾಯವಾಗದಂತೆ ಸರಾಸರಿ ಅಂಕಗಳ ಆಧಾರದಲ್ಲಿ ರಾಂಕ್ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶವನ್ನು kea.kar.nic.in ಅಥವಾ cetonline.karnataka.gov.in ವೆಬ್ ಸೈಟ್ ನಲ್ಲಿ ನಿಮ್ಮ ವಿವರಗಳನ್ನು ನೀಡಿ ಫಲಿತಾಂಶ ವೀಕ್ಷಿಸಬಹುದು.