ಮಾಧ್ಯಮದವರ ಮೇಲೆ ಹಲ್ಲೆ: ಯೂಥ್ ಕಾಂಗ್ರೆಸ್ ನ ರಘುವೀರ್ ಗೌಡಗೆ ಶೋಕಾಸ್ ನೋಟಿಸ್

ಸೋಮವಾರ, 9 ಅಕ್ಟೋಬರ್ 2017 (19:18 IST)
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ದ ಯೂಥ್ ಕಾಂಗ್ರೆಸ್ ಪ್ರತಿಭಟನೆ ವೇಳೆ ವರದಿಗೆ ಬಂದಿದ್ದ ಮಾಧ್ಯಮ‌ ಪ್ರತಿನಿಧಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಸಿದಂತೆ  ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ‌ ರಘುವೀರ್ ಗೌಡನಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ನೋಟಿಸ್ ಜಾರಿ ಮಾಡಿದ್ದು, 7 ದಿನಗಳೊಳಗೆ ನೋಟಿಸ್ ಗೆ ಉತ್ತರಿಸಬೇಕು ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕೇಂದ್ರ ಸರ್ಕಾರ ಎಲ್ ಪಿಜಿ ಹಾಗೂ ದಿನಸಿ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಅ.7ರಂದು ಕಾಂಗ್ರೆಸ್ ಯುವ ಘಟಕ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಘುವೀರ್ ಗೌಡ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಸ್ತೆಯಲ್ಲಿಯೇ ಕಟ್ಟಿಗೆಯಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ಮಾಡಲು ಕಾರ್ಯಕರ್ತರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಒಲೆಗೆ ಬೆಂಕಿಹಚ್ಚುವ ಸಂದರ್ಭದಲ್ಲಿ ಸುಮಂತ ಎಂಬ ಮಹಿಳೆಗೆ ಬೆಂಕಿ ತಗುಲಿ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.

ಈ ದೃಶ್ಯವನ್ನು ಚಿತ್ರೀಕರಣ ಮಾಡದಂತೆ ಮಾಧ್ಯಮದವರನ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದರು. ಮಾಧ್ಯಮದವರ ಜತೆ ಅನುಚಿತವಾಗಿ ವರ್ತಿಸಿ, ಕ್ಯಾಮೆರಾಗಳಿಗೆ ಧಕ್ಕೆ ಮಾಡಿದ್ದಲ್ಲದೆ ಹಲ್ಲೆಗೂ ಮುಂದಾಗಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ