ಬೆಂಗಳೂರು: ಕರ್ನಾಟಕ ಸರ್ಕಾರ ಐಟಿ ಬಿಟಿ ಮತ್ತು ಬಿಪಿಒ ಸೇರಿದಂತೆ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಹೆಚ್ಚಳ ಮಾಡಲು ಮುಂದಾಗಿದೆ. ಇದಕ್ಕೆ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು 10 ಗಂಟೆ ಕೆಲಸ ಮಾಡುತ್ತಿದ್ದರೆ ಫ್ಯಾಮಿಲಿ ಏನು ಮಾಡೋಣ ಎಂದು ಪ್ರಶ್ನೆ ಮಾಡಿದ್ದಾರೆ.
ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲಸದ ಅವಧಿ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳೂ ಭಾಗಿಯಾಗಿದ್ದು ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿವೆ. ಇದರಿಂದ ನೌಕರರಿಗೆ ಮಾನಸಿಕ ಒತ್ತಡವಾಗುತ್ತದೆ ಎಂದು ಪ್ರತಿಪಾದಿಸಿವೆ.
ಈ ಬಗ್ಗೆ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಚೇರಿಯಲ್ಲಿ 8 ಗಂಟೆ ಕೆಲಸ ಮಾಡುವಷ್ಟರಲ್ಲೇ ಸಾಕಾಗಿ ಹೋಗುತ್ತದೆ. 10 ಗಂಟೆ ಎಂದರೆ ಕೆಲಸವೊಂದನ್ನೇ ಮಾಡುತ್ತಿರಬೇಕಾ? ಕುಟುಂಬಕ್ಕೆ ಯಾವಾಗ ಸಮಯ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಕೆಲವರು ನಮಗೆ ನಮ್ಮ ಪರ್ಸನಲ್ ಸಮಸ್ಯೆಗಳು, ಕೆಲಸಗಳು ಇರುತ್ತವೆ. ದಿನದ 10 ಗಂಟೆಯೂ ಕೆಲಸ ಮಾಡುತ್ತಿರಬೇಕು ಎಂದರೆ ನಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯ ಕೊಡುವುದು ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಪ್ರತಿನಿತ್ಯ ಕಚೇರಿಗೆ ಓಡಾಡಲೇ 1 ಗಂಟೆ ಸಮಯ ವ್ಯರ್ಥವಾಗುತ್ತದೆ. ಇನ್ನು 10 ಗಂಟೆ ಕಚೇರಿ ಕೆಲಸ ಮಾಡಿ ಟ್ರಾಫಿಕ್ ನಲ್ಲಿ ಒಂದೊಂದು ಗಂಟೆ ಹರಸಾಹಸ ಪಟ್ಟು ಮನೆಗೆ ಬರುವಷ್ಟರಲ್ಲಿ ಹೈರಾಣಾಗಿಬಿಡುತ್ತದೆ. ಈಗಾಗಲೇ ಕೌಟುಂಬಿಕ ಭಿನ್ನಾಭಿಪ್ರಾಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಕೆಲಸದಲ್ಲೇ ಬಹುಪಾಲು ಸಮಯ ಕಳೆದರೆ ವೈಯಕ್ತಿಕ ಜೀವನದ ಕತೆ ಏನಾಗಬೇಕು? ಮತ್ತು ಆರೋಗ್ಯದ ಸ್ಥಿತಿ ಏನಾಗಬೇಕು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.