ಕೇಂದ್ರ ಸರ್ಕಾರದ ನೋಟು ನಿಷೇಧ ಕುರಿತಂತೆ ಪರ-ವಿರೋಧ ಚರ್ಚೆಗಳು ಮುಂದುವರೆದಿದ್ದು, ಎಟಿಎಂ ಮುಂದೆ 'ನೋ ಕ್ಯಾಶ್' ಎಂಬ ಬೋರ್ಡ್ ನೋಡಿ ನೋಡಿ ಜನರು ರೋಸಿ ಹೋಗಿದ್ದಾರೆ. ಕೇಂದ್ರದ ಈ ಏಕಾಏಕಿ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ. ಬಿಹಾರ್ ಮುಖ್ಯಮಂತ್ರಿ, ಜನತಾ ದಳ (ಯು) ನಾಯಕ, ನಿತೀಶ್ ಕುಮಾರ್ ನೋಟು ನಿಷೇಧಕ್ಕೆ ಪ್ರಧಾನಿ ಮೋದಿ ಅವರಿಗೆ ಬಹಿರಂಗ ಬೆಂಬಲ ನೀಡಿರಬಹುದು. ಆದರೆ ಬೆಂಗಳೂರು ನಗರದಲ್ಲಿ ಜೆಡಿ(ಯು) ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಕುಮಾರ್ ಜಾಗೀರ್ದಾರ್, ತಿಂಗಳಿಂದ ಸತ್ತಂತಿದ್ದ ( ಕಾರ್ಯ ನಿರ್ವಹಿಸದ) ಎಟಿಎಂ ಯಂತ್ರವನ್ನು ಇಟ್ಟುಕೊಳ್ಳುವುದರಲ್ಲಿ ಪ್ರಯೋಜನವಿಲ್ಲ. ನಾವು ಇದರ ನಕಲಿ ಉಸಿರಾಟ ವ್ಯವಸ್ಥೆಯನ್ನು ತೆಗೆದಿದ್ದೇವೆ. ಮತ್ತೀಗ ಅದು ಸಾವನ್ನಪ್ಪಿದೆ. ಹೀಗಾಗಿ ಸಂಪ್ರದಾಯದಂತೆ ಜನರ ಸಮ್ಮುಖದಲ್ಲಿ ನಾವಿದರ ಅಂತಿಮ ಸಂಸ್ಕಾರವನ್ನು ಕೈಗೊಂಡಿದ್ದೇವೆ. ಪ್ರಸಾದವನ್ನು ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಕಳುಹಿಸಲಾಗುವುದು. ಈ ಮೂಲಕವಾದರೂ ಅವರು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂದು ಹೇಳಿದ್ದಾರೆ.