ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Krishnaveni K

ಮಂಗಳವಾರ, 10 ಜೂನ್ 2025 (11:20 IST)
ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತದಿಂದ 11 ಜನರ ಸಾವಿಗೆ ಯಾರು ಹೊಣೆ, ಯಾರು ಕಾರಣ ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ನೀಡಿರುವ ಉತ್ತರ ನೋಡಿ.

ಜೂನ್ 4 ರಂದು ಐಪಿಎಲ್ ಗೆದ್ದಿದ್ದ ಆರ್ ಸಿಬಿ ಟೀಂ ಬೆಂಗಳೂರಿಗೆ ಬಂದು ವಿಜಯೋತ್ಸವ ಆಚರಿಸುವ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸರ್ಕಾರವೇ ಹೊಣೆ ಎಂದು ವಿಪಕ್ಷಗಳು, ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಇತ್ತ ಸರ್ಕಾರ ನಮ್ಮ ತಪ್ಪಿಲ್ಲ, ಪೊಲೀಸರು ಭದ್ರತೆ ಕೊಡುವಲ್ಲಿ  ವಿಫಲರಾದರು ಎಂದು ಗೂಬೆಕೂರಿಸುತ್ತಿದೆ.

ಈ ಬಗ್ಗೆ ಇಂದು ಸಚಿವ ಎಂಬಿ ಪಾಟೀಲ್ ರನ್ನು ಮಾಧ್ಯಮಗಳು ಪ್ರಶ್ನೆ ಮಾಡಿವೆ. ದುರಂತಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದಾಗ ಅವರು ಹೇಳಿದ್ದು ಹೀಗೆ. ‘ಇದು ಯಾರೊಬ್ಬರೂ ಊಹೆ ಮಾಡಿರಲಿಲ್ಲ. ಪ್ರವಾಹ ಎಲ್ಲಾ ಬಂದಾಗ ಆದ ಹಾಗೆ ಆಗಿರೋದು. ಉತ್ತರ ಪ್ರದೇಶದಲ್ಲಿ ಕುಂಬಮೇಳದಲ್ಲಿ ಆಗಿತ್ತಲ್ಲಾ. 120 ಜನ ಪ್ರಾಣ ಕಳೆದುಕೊಂಡರು. ಇದು ಎಲ್ಲವೂ ನೋವಿನ ಘಟನೆ. ಏನೇ ಮಾಡಿದರೂ ಜೀವ ವಾಪಸ್ ಬರಲ್ಲ.

ಏನಾಗಿದೆ, ಯಾಕಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾಕೆ ಗೊಂದಲ ಆಯಿತು ಎನ್ನುವುದು ತನಿಖೆಯಿಂದ ತಿಳಿದುಬರಲಿದೆ. ಸರ್ಕಾರ ಎಲ್ಲಿ ಎಡವಿತು ಎಂದು ನಾನೇ ಹೇಗೆ ಹೇಳಕ್ಕೆ ಆಗುತ್ತದೆ.  ಸಿಐಡಿ ತನಿಖೆ ಆಗ್ತಿದೆಯಲ್ಲಾ ಗೊತ್ತಾಗುತ್ತದೆ. ಈ ಬಗ್ಗೆ ಎಐಸಿಸಿ ನಾಯಕರು ಯಾರೂ ನಮ್ಮನ್ನು ಸಂಪರ್ಕಿಸಿ ಮಾಹಿತಿ ಕೇಳಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ