ಮೈಸೂರು: ಭಾರತ ಮತ್ತು ಪಾಕಿಸ್ತಾನ ಕದನದ ಬಳಿಕ ರಾಜಸ್ಥಾನದ ಬೇಕರಿಯೊಂದರಲ್ಲಿ ಮೈಸೂರ್ ಪಾಕ್ ಸಿಹಿ ತಿಂಡಿಯ ಹೆಸರನ್ನು ಮೈಸೂರು ಶ್ರೀ ಎಂದು ಬದಲಾಯಿಸಲಾಗಿದೆ. ಆದರೆ ಇದಕ್ಕೀಗ ಮೂಲ ಬಾಣಸಿಗನ ವಂಶಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ರಾಜಸ್ಥಾನದ ಬೇಕರಿಯೊಂದರಲ್ಲಿ ಪಾಕಿಸ್ತಾನದ ಮೇಲೆ ಜನಾಕ್ರೋಶದ ಹಿನ್ನಲೆಯಲ್ಲಿ ಸಿಹಿ ತಿಂಡಿಯ ಹೆಸರನ್ನೇ ಶ್ರೀ ಎಂದು ಬದಲಾಯಿಸಲಾಗಿದೆ. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಅಸಲಿಗೆ ಪಾಕ್ ಎನ್ನುವುದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ. ಹಾಗಿದ್ದರೂ ಹೆಸರು ಬದಲಾವಣೆ ಮಾಡಿರುವುದಕ್ಕೆ ಮೂಲ ಬಾಣಸಿಗರಾದ ಕಾಕಾಸುರ ಮಾದಪ್ಪ ಅವರ ವಂಶಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಯಾರು ಈ ಕಾಕಾಸುರ ಮಾದಪ್ಪ?
ಈ ಹಿಂದೆ 19 ನೇ ಶತಮಾನದಲ್ಲಿ ಮೈಸೂರು ರಾಜರ ಆಸ್ಥಾನದಲ್ಲಿ ಅಡುಗೆ ಭಟ್ಟರಾಗಿದ್ದ ಕಾಕಾಸುರ ಮಾದಪ್ಪ ಮೈಸೂರ್ ಪಾಕ್ ಎನ್ನುವ ಸಿಹಿ ತಿಂಡಿಯನ್ನು ಸೃಷ್ಟಿ ಮಾಡಿದವರು. ಸಕ್ಕರೆ, ತುಪ್ಪ, ಕಡಲೆ ಹಿಟ್ಟು ಬಳಸಿ ಅವರು ಮಾಡಿದ ಸಿಹಿ ತಿನಿಸು ಭಾರೀ ಇಷ್ಟವಾಯಿತು. ಮೈಸೂರಿನಲ್ಲಿ ಮಾಡಿರುವ ಕಾರಣಕ್ಕೆ ಇದಕ್ಕೆ ಮೈಸೂರು ಪಾಕ್ ಎನ್ನುವ ಹೆಸರು ಬಂತು.
ಈಗ ಮೈಸೂರು ಪಾಕ್ ವಿಶ್ವಿವಿಖ್ಯಾತವಾದ ಸಿಹಿ ತಿನಿಸಾಗಿದೆ. ಆದರೆ ಇದರ ಹೆಸರು ಬದಲಾವಣೆ ಮಾಡಿರುವುದಕ್ಕೆ ಅವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ಪಾಕ್ ಎನ್ನುವ ಹೆಸರು ಈಗ ಪ್ರಖ್ಯಾತಿ ಪಡೆದಿದೆ. ಇದರಲ್ಲಿರುವ ಪಾಕ್ ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಇದರ ಹೆಸರು ಬದಲಾವಣೆ ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.