ಬೆಂಗಳೂರು: ಪಥಸಂಚಲನ ಮಾಡೇ ಮಾಡುತ್ತೇವೆಂದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಪ್ರಭಾಕರ್ ಭಟ್ ಆಗಲಿ, ಅವರಪ್ಪನಾಗಲಿ ಕಾನೂನು ಎಲ್ಲರಿಗೂ ಒಂದೇ ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ಗಿಂತ ಕಲ್ಲಡ್ಕ ಪ್ರಭಾಕರ್ ಭಟ್ ದೊಡ್ಡವರಲ್ಲ. ಕೋರ್ಟ್ ಅನುಮತಿ ಸಿಗದೇ ಮಾಡುತ್ತಾರಾ? ಅನುಮತಿ ಇಲ್ಲದೇ ಮಾಡಿದರೆ ಸರ್ಕಾರ ಕತ್ತೆ ಕಾಯುತ್ತಿರುತ್ತಾ? ಅನುಮತಿ ತಗೆದುಕೊಳ್ಳಲೇ ಬೇಕು ಎಂದು ವಾಗ್ದಾಳಿ ನಡೆಸಿದರು
ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಕರೆದರೂ ಬರಲ್ಲ, ಅವರ ಬಳಿ ಏನಾದ್ರೂ ಕಂಟೆಂಟ್ ಇರ್ತಿದ್ರೆ ಬರ್ತಿದ್ರು. ಇನ್ನೂ ಆರ್ಎಸ್ಎಸ್ ರಿಜಿಸ್ಟರ್ ಆಗಿದ್ಯಾ ಎಂದು ಕೇಳಿದ್ರೆ ತಪ್ಪಾ ಎಂದು ಪ್ರಶ್ನೆ ಮಾಡಿದರು.
ಇವರಿಗೆ ಎಲ್ಲಿಂದ್ದ ಹಣ ಬರುತ್ತದೆಂದು ದಾಖಲೆ ನೀಡಲಿ. ಇನ್ನು ದೇವಸ್ಥಾನದ ಹುಂಡಿ ಲಾಕ್ ಆಗಿರುತ್ತೆ. ಅದನ್ನ ತೆಗೆಯಬೇಕಾದರೆ ತಹಶೀಲ್ದಾರ್ ಬರಬೇಕು, ಎಲ್ಲವನ್ನೂ ಪಾರದರ್ಶಕವಾಗಿ ತೆಗೆಯುತ್ತಾರೆ. ಆದರೆ ಆರ್ಎಸ್ಎಸ್ ಬರುತ್ತಿರುವ ಹಣದ ಮೂಲ ಬಗ್ಗೆ ಗೊತ್ತಾಗಬೇಕಲ್ವಾ ಎಂದು ಪ್ರಶ್ನೆ ಮಾಡಿದರು.
ದೇಶದ ದೊಡ್ಡ ಎನ್ಜಿಓ ಅಂತ ಹೇಳುತ್ತಿರುವ ಮೋದಿ ಅವರು ಅದರ ಲೆಕ್ಕವನ್ನು ಕೊಡಲಿ. ಸರ್ದಾರ್ ವಲ್ಲಬಾಯ್ ಪಟೇಲ್ರಿಂದ ಹಿಡಿದು ಇಂದಿರಾಗಾಂಧಿವರೆಗೆ ನಾವು ದೊಡ್ಡ ಮನಸ್ಸು ಮಾಡಿಕೊಂಡು ಬಂದಿದ್ದೇವೆ, ಅದೇ ತಪ್ಪಾಗಿದೆ ಎಂದು ಹರಿಹಾಯ್ದರು.