ಮೊದಲು ಗೃಹಲಕ್ಷ್ಮಿ ಹಣ ಹಾಕಿ ಆಮೇಲೆ ಮಾತನಾಡಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಜನರಿಂದ ಕ್ಲಾಸ್

Krishnaveni K

ಬುಧವಾರ, 16 ಅಕ್ಟೋಬರ್ 2024 (08:44 IST)
Photo Credit: X
ಬೆಂಗಳೂರು: ಗೃಹಲಕ್ಷ್ಮಿ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಆಕ್ರೋಶವನ್ನು ಜನರು ಸೋಷಿಯಲ್ ಮೀಡಿಯಾ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಹಾಕಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ರಾಯಭಾಗ್ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಎಂಬ ಮಹಿಳೆ ಗ್ರಂಥಾಲಯವೊಂದನ್ನು ಸ್ಥಾಪಿಸಿರುವ ವಿಚಾರ ಭಾರೀ ಸುದ್ದಿಯಾಗಿತ್ತು. ಇದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಮಲ್ಲವ್ವನ ಗ್ರಂಥಾಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾನೂರು ಹೆಗ್ಗಡತಿ ಪುಸ್ತಕವನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಮಲ್ಲವ್ವನ ಗ್ರಂಥಾಲಯಕ್ಕೆ ರಾಷ್ಟ್ರಕವಿ ಕುವೆಂಪು ಬರೆದ ಕಾನೂರು ಹೆಗ್ಗಡತಿ ಪುಸ್ತಕವನ್ನು ಕಳುಹಿಸಿಕೊಡುತ್ತಿದ್ದೇನೆ ಎಂದು ಪುಸ್ತಕದೊಂದಿಗೆ ಫೋಟೋ ತೆಗೆಸಿಕೊಂಡು ಸಚಿವೆ ಫೋಟೋ ಹಾಕಿಕೊಂಡಿದ್ದಾರೆ.

ಆದರೆ ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮೊದಲು ಗೃಹಲಕ್ಷ್ಮಿ ಹಣವನ್ನು ಸರಿಯಾಗಿ ಖಾತೆಗೆ ಜಮೆ ಮಾಡಿ. ಆಮೇಲೆ ಮಾತನಾಡಿ. ಜೂನ್ ತಿಂಗಳಿನ ಕಂತು ಮಾತ್ರ ಬಂದಿದೆ. ಜುಲೈನದ್ದು ಇನ್ನೂ ಬಂದಿಲ್ಲ. ಪ್ರತೀ ತಿಂಗಳು ಹಣ ಜಮೆ ಆಗುತ್ತದೆ ಎನ್ನುತ್ತೀರಿ. ಆದರೆ ಸರಿಯಾಗಿ ಹಣವೇ ಬರಲ್ಲ. ಹಾಗಿದ್ದ ಮೇಲೆ ಗೃಹಲಕ್ಷ್ಮೀ ಯೋಜನೆ ಸಾರ್ಥಕವಾಯಿತು ಎಂದು ಫೋಟೋ ಯಾಕೆ ಹಾಕಿಕೊಳ್ಳುತ್ತೀರಿ ಎಂದು ನೆಟ್ಟಿಗರು ಜಾಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ